200 ಎಕರೆ ಭೂಮಿಯಲ್ಲಿ ಆಯುರ್ವೇದ ಸಸ್ಯೋದ್ಯಾನ : ಸಚಿವ
ಮೂಡಿಬಿದರೆ: ರಾಜ್ಯದಲ್ಲಿ ಆಯುರ್ವೇದ ಸಸ್ಯಗಳ ಉದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶ ರಾಜ್ಯ ಸರಕಾರಕ್ಕಿದೆ. ಈ ವಿಷಯವನ್ನು ತೋಟಗಾರಿಕೆ ಸಚಿವ ಅಲ್ಲಂ ವೀರಭದ್ರಪ್ಪ ಶುಕ್ರವಾರ ಇಲ್ಲಿ ತಿಳಿಸಿದರು. ಎರಡು ದಿನಗಳ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
200 ಎಕರೆ ಪ್ರದೇಶದಲ್ಲಿ ಆಯುರ್ವೇದ ಔಷಧೀಯ ಮೂಲಿಕೆಗಳ ಉದ್ಯಾನಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಪಡಿಸಲು ತಮ್ಮ ಇಲಾಖೆ ಉದ್ದೇಶಿಸಿದೆ ಎಂದು ಅವರು ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕೃಷಿ ಮೇಳವನ್ನು ಆಯೋಜಿಸಿತ್ತು.
ತೋಟಗಾರಿಕೆ ಬೆಳೆಗಳ ಬೆಲೆ ಕುಸಿತದ ಬಗ್ಗೆ ಮಾತನಾಡಿದ ಅವರು, ರೈತರು ಸಾಂಪ್ರದಾಯಿಕ ಕೃಷಿ ಹಾಗೂ ಬೆಳೆಗಳಿಗೇ ಜೋತು ಬೀಳದೆ, ಪರ್ಯಾಯ ಬೆಳೆ ಬೆಳೆಯಲು ಮುಂದಾಗಬೇಕು ಎಂದೂ ಸಲಹೆ ಮಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ ಅವರು ನಿರಂತರವಾಗಿ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇರುವ ನಿಟ್ಟಿನಲ್ಲಿ ಪರ್ಯಾಯ ಬೆಳೆಗಳ ಬಗ್ಗೆ ಗಂಭೀರ ಚಿಂತನೆ ನಡೆಸುವ ಅನಿವಾರ್ಯತೆಯ ಬಗ್ಗೆ ಗಮನ ಸೆಳೆದರು.
ಎಸ್.ಕೆ.ಡಿ.ಆರ್.ಡಿ.ಪಿಯ ಈ ಕೃಷಿ ಮೇಳದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 15,000 ರೈತರು ಪಾಲ್ಗೊಂಡಿದ್ದರು. (ಯು.ಎನ್.ಐ)