ಶ್ರೀನಾಥ್ ಆಡೋದು ಅನುಮಾನ, ಮೊಂಗಿಯಾ ಬದಲಿಗೆ ದಿಘ
ಚೆನ್ನೈ: ಭಾನುವಾರದಿಂದ ಇಲ್ಲಿನ ಚೆಪಾಕ್ನಲ್ಲಿ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ- ಭಾರತ 3ನೇ ಟೆಸ್ಟ್ ಪಂದ್ಯದಲ್ಲಿ ಮೈಸೂರು ಎಕ್ಸ್ಪ್ರೆಸ್ ಜಾವಗಲ್ ಶ್ರೀನಾಥ್ ಆಡುವುದು ಅನುಮಾನ. 2ನೇ ಟೆಸ್ಟ್ನಲ್ಲಿ ಮೂಗಿಗೆ ಪೆಟ್ಟು ತಿಂದಿರುವ ವಿಕೆಟ್ ಕೀಪರ್ ನಯನ್ ಮೊಂಗಿಯಾ ಬದಲು ಸಮೀರ್ ದಿಘ ಆಡುವ ಸಾಧ್ಯತೆ ನಿಚ್ಚಳವಾಗಿದೆ.
ಶುಕ್ರವಾರ ನಡೆದ ನೆಟ್ ಅಭ್ಯಾಸದಲ್ಲಿ ಶ್ರೀನಾಥ್ ಬೌಲಿಂಗ್ ಮಾಡಿದರಾದರೂ, ಕ್ಷೇತ್ರ ರಕ್ಷಣೆಯಲ್ಲಿ ಚುರುಕಾಗಿರಲಿಲ್ಲ. ಚೆಂಡನ್ನು ಎಸೆಯುವಾಗಂತೂ ತೀವ್ರ ಬಳಲಿದಂತೆ ಕಂಡುಬಂದರು. ಮುರಿದಿದ್ದ ಅವರ ಹೆಬ್ಬೆರಳು ಈಗ ಸರಿಹೋಗಿದೆ. ಆದರೆ ಅವರು ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿರುವ ಬಗ್ಗೆ ಅನುಮಾನಗಳಿದ್ದು, ಅಂತಿಮ ಟೆಸ್ಟ್ಗೆ ಆಡಲಿರುವ 11 ಮಂದಿ ತಂಡದಲ್ಲಿ ಸ್ಥಾನ ಪಡೆಯುವುದು ಇನ್ನೂ ಖಾತ್ರಿಯಾಗಿಲ್ಲ.
ಕೋಲ್ಕತಾ ಟೆಸ್ಟ್ನಲ್ಲಿ ಹರ್ಭಜನ್ ಬೌಲಿಂಗ್ನಲ್ಲಿ ಮೂಗಿಗೆ ಹೊಡೆತ ತಿಂದ ವಿಕೆಟ್ ಕೀಪರ್ ನಯನ್ ಮೊಂಗಿಯಾ ಬದಲಿಗೆ ಮುಂಬಯಿಯ ಸಮೀರ್ ದಿಘ ಆಡುವುದು ಹೆಚ್ಚೂ ಕಮ್ಮಿ ಖಚಿತವಾಗಿದೆ. ತಂಡವನ್ನು ಬಂದು ಸೇರುವಂತೆ ದಿಘಗೆ ತಂಡದ ಮ್ಯಾನೇಜರ್ ಚೇತನ್ ಚೌಹಾನ್ ಬುಲಾವು ನೀಡಿದ್ದಾರೆ. ಶ್ರೀನಾಥ್ ಬದಲಿಗೆ ಒರಿಸ್ಸಾದ ದೇಬಶಿಶ್ ಮೊಹಾಂತಿಯನ್ನು ಆಡಿಸುವ ಸಾಧ್ಯತೆಗಳೂ ಚೆನ್ನೈನಲ್ಲಿ ಕೇಳಿಬರುತ್ತಿವೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ 1-1ರಲ್ಲಿ ಸಮನಾಗಿದ್ದು, ಅಂತಿಮ ಟೆಸ್ಟ್ ಸರಣಿಯ ನಿರ್ಣಾಯಕ ಪಂದ್ಯವಾಗಲಿದೆ.
(ಇನ್ಫೋ ವಾರ್ತೆ)