ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಬಾಗಿಲೊಳು ಕೈಮುಗಿ ಮೂಕಾಂಬಿಕೆಗೆ

By Staff
|
Google Oneindia Kannada News

*ವಿಘ್ನೕಶ್ವರ ಕುಂದಾಪುರ

Kollur Mookambika Templeಎಂಟು ವರ್ಷಗಳಿಂದ ಸಾಕಷ್ಟು ವಿವಾದಗಳಲ್ಲಿ ಹಾದು ಬಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ದ್ವಾರ ನಿರ್ಮಾಣ ಕಾರ್ಯ ಹೆಚ್ಚೂಕಮ್ಮಿ ಮುಗಿದಿದ್ದು, ಇನ್ನೇನು ಈಗಲೋ ಆಗಲೋ ಹೊಸ ರೂಪಿನೊಂದಿಗೆ ಗೋಡೆಗೆ ಬೆಸೆಯಲಿದೆ.

ಏನೆಲ್ಲಾ ವಿವಾದಗಳ ನಡುವೆಯೂ ಕೊಲ್ಲೂರಿನಲ್ಲಿ ಮಾರ್ಚ್‌ 10 ರಿಂದ 18 ರವರೆಗೆ ಜಾತ್ರೆ ನಡೆಯುತ್ತಿದೆ. ಸಾವಿರಾರು ಭಕ್ತರು ಸೌಪರ್ಣಿಕೆಯಲ್ಲಿ ಮಿಂದ ಧನ್ಯತೆ ಅನುಭವಿಸಿದ್ದಾರೆ. ಮಾರ್ಚ್‌ 17 ರಂದು ಮೂಕಾಂಬಿಕೆಯ ರಥೋತ್ಸವ. ಈ ಬೆಳಕಿನಲ್ಲಿ ವಿವಾದದ ಹಿನ್ನೆಲೆ ಮುನ್ನೆಲೆ ಇಲ್ಲಿದೆ.

ದೇವಸ್ಥಾನದ ಪ್ರಧಾನ ಬಾಗಿಲನ್ನು ಅಭಿವೃದ್ಧಿ ಪಡಿಸಲು ತೀರ್ಮಾನಿಸಿದ್ದು 1992ರಲ್ಲಿ. ಸಿಮೆಂಟಿನಲ್ಲಿ ಪ್ರಧಾನ ದ್ವಾರ ನಿರ್ಮಿಸಲು ದೇವಸ್ಥಾನದ ಟ್ರಸ್ಟ್‌ ನಿರ್ಧರಿಸಿತು. 1993- 94ರಲ್ಲಿ ನಿರ್ಮಾಣ ಕಾರ್ಯ ಶುರುವಾಯಿತು. ಕಾಮಗಾರಿ ಪ್ರಾರಂಭವಾದ ಕೆಲ ತಿಂಗಳಲ್ಲೇ ಸಿಮೆಂಟು ಅಪವಿತ್ರ, ಭಗವದಾಲಯದ ಸೌಂದರ್ಯಕ್ಕೂ ಅದು ಬಾಧಕ. ಹೀಗಾಗಿ ಸಿಮೆಂಟಿನಲ್ಲಿ ದ್ವಾರ ನಿರ್ಮಾಣ ಕೂಡದು ಎಂಬ ತಕರಾರುಗಳು ಕೋರ್ಟಿಗೂ ಹೋದವು. ಕೆಲಸ ನಿಂತಿತು. ಕಟ್ಟಿದ್ದ ಸಿಮೆಂಟಿನ ಅರೆ ಸ್ತಂಭಗಳನ್ನು ಕೆಡವಲಾಯಿತು.

ಸಿಮೆಂಟು ಅಪವಿತ್ರ ಅಂದರು ವೆಂಕಟಾಚಲಯ್ಯ : ಸಿಮೆಂಟು ಪವಿತ್ರವೋ ಅಥವಾ ಅದಲ್ಲದಿದ್ದರೆ ಮತ್ತಾವುದು ಪವಿತ್ರ ಎಂದು ತಿಳಿಯಲು ನ್ಯಾಯಾಲಯ, ನ್ಯಾಯಮೂರ್ತಿ ವೆಂಕಟಾಚಲಯ್ಯ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿತು. ತಕರಾರುಗಳಿಗೆಲ್ಲಾ ಅಂತಿಮ ತೆರೆ ಎಳೆದು, ನೆನೆಗುದಿಗೆ ಬಿದ್ದಿದ್ದ ಪ್ರಧಾನ ದ್ವಾರದ ಕೆಲಸಕ್ಕೆ ಕಾಯಕಲ್ಪ ಕೊಡುವಂತೆ ಸೂಚಿಸಿತು. ಸಿಮೆಂಟಿನಿಂದ ಕೆಲಸ ಕೂಡದೆನ್ನುತ್ತದೆ ದೇವಾಲಯ ವಾಸ್ತು ಶಾಸ್ತ್ರ. ಹೀಗಾಗಿ ಅಮೃತಶಿಲೆ ಹಾಗೂ ಮರವನ್ನು ಉಪಯೋಗಿಸಿಯೇ ಪ್ರಧಾನ ದ್ವಾರ ನಿರ್ಮಿಸಬೇಕೆಂದು ನ್ಯಾಯಮೂರ್ತಿ ವೆಂಕಟಾಚಲಯ್ಯ ಸಮಿತಿ ಶಿಫಾರಸ್ಸು ಮಾಡಿತು. ಶಾಸ್ತ್ರೋಕ್ತವಾಗಿ ನಿರ್ಮಾಣ ಕಾರ್ಯ ಮುಂದುವರೆಯಿತು.

ಇಷ್ಟೆಲ್ಲಾ ಆಗುವಷ್ಟರಲ್ಲೇ ವರ್ಷಗಳೇ ಉರುಳಿದ್ದವು. ಪ್ರಧಾನ ದ್ವಾರದ ಕಾಮಗಾರಿ ನಡೆಯುತ್ತಿದೆ ಅನ್ನುವ ವಿಷಯವೇ ಮಂಗಳೂರಿನ ಎಷ್ಟೋ ಭಕ್ತಾದಿಗಳ ಮನದಿಂದ ಮರೆಯಾಗಿತ್ತು. ಈಗ ಪ್ರಧಾನ ದ್ವಾರ ಅಮೃತ ಶಿಲೆಯಿಂದ ಕಂಗೊಳಿಸುತ್ತಿದೆ. ಸ್ತಂಭಗಳಿಗೆ ಸುಂದರವಾದ ಕೆತ್ತನೆಗಳುಳ್ಳ ಮರದ ಹೊದಿಕೆ ಸಿದ್ಧವಾಗಿದೆ. ಅಮೃತ ಶಿಲೆ ಮೇಲಿನ ಕೆತ್ತನೆ ಕೆಲಸ ಶೇ.90ರಷ್ಟು ಮುಗಿದಿದೆ. ಕೆಲಸ ಮುಗಿದೊಡನೆ ಮರ ಹಾಗೂ ಸ್ತಂಭಗಳ ಬೆಸುಗೆ ಕೆಲಸ ಬಾಕಿಯಿದೆ, ಅಷ್ಟೆ.

ಸ್ತಂಭದ ಮೇಲೆ ಎರಡು ಸ್ತರಗಳಲ್ಲಿ ಕೆತ್ತನೆ ಮಾಡಲಾಗಿದೆ. ಮೇಲ್ಭಾಗದಲ್ಲಿ ತೇಗ ಮರದ ಮೇಲೆ ಕೆತ್ತನೆ ಮೂಡಿದ್ದರೆ, ಕೆಳಭಾಗ ಶಿಲೆಯ ಮೇಲಿನ ಕೆತ್ತನೆ ಬಿಂಬಿಸಲಿದೆ. ಪ್ರಧಾನ ಬಾಗಿಲ ಕೆಲಸಕ್ಕೆ ಈವರೆಗೆ ಒಂದೂವರೆ ಕೋಟಿಗೂ ಹೆಚ್ಚು ಹಣ ಸುರಿಯಲಾಗಿದೆ. ಎಲ್ಲಾ ಕೆಲಸಗಳು ಮುಗಿಯಲು ಇನ್ನೂ 45 ಲಕ್ಷ ರುಪಾಯಿ ಹಣ ಬೇಕು. ದೇವಾಲಯ ದತ್ತಿಗೆ ಅದೇ ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾರೆ ದತ್ತಿಯ ನಿರ್ವಾಹಕ ಬಿ.ಎ.ಸುಕುಮಾರ ಶೆಟ್ಟಿ.

ಬ್ರಹ್ಮ ಕಳಸೋತ್ಸವಾನೂ ಮಾಡ್ತಾರೆ : ಮಹಾದ್ವಾರ ಪೂರ್ಣ ಸಿದ್ಧವಾದೊಡನೆ ದೇವಾಲಯಕ್ಕೆ ಅಷ್ಟಬಂಧನ ಮಾಡಲಾಗುವುದು. ಕಳೆದ 28 ವರ್ಷಗಳಿಂದ ನಡೆಸದಿರುವ ಬ್ರಹ್ಮ ಕಳಸೋತ್ಸವವನ್ನೂ ಇದೇ ಸಂದರ್ಭದಲ್ಲಿ ನಡೆಸಲು ದತ್ತಿ ನಿರ್ಧರಿಸಿದೆ. ಆನೆ ಬಾಗಿಲು, ಅರೆಬರೆ ಕೆಲಸವಾಗಿರುವ ಯಾತ್ರಿ ನಿವಾಸದ ಕೆಲಸ ಮುಂದುವರೆಸುವುದು, ಸಾಮುದಾಯಿಕ ಭವನ ಕಂ ಮದುವೆ ಛತ್ರದ ನಿರ್ಮಾಣ, ಭಕ್ತಾದಿಗಳಿಗೆ ರಾತ್ರಿ ಹೊತ್ತೂ ಊಟದ ವ್ಯವಸ್ಥೆ (ಪ್ರಸ್ತುತ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ) ಹಾಗೂ ಕೊಲ್ಲೂರಿನ ರಸ್ತೆಯನ್ನು ಜೋಡಿ ಮಾರ್ಗವನ್ನಾಗಿ ಪರಿವರ್ತಿಸುವುದು ದತ್ತಿಯ ಮಹತ್ವಾಕಾಂಕ್ಷೆಯ ಯೋಜನೆಗಳು. ಆದರೆ ಈ ಕಾಮಗಾರಿಗಳಿಗೆ ಹರಿಸಲು ದತ್ತಿಯ ಬಳಿ ಹಣವಿಲ್ಲ.

ಕೃಷ್ಣ ದುಡ್ಡು ಕೊಡಿಸ್ತಾರಂತೆ : ದೇವಾಲಯಕ್ಕೆ ಇತ್ತೀಚೆಗೆ ಭೇಟಿ ಕೊಟ್ಟಿದ್ದ ಮುಖ್ಯಮಂತ್ರಿ ಕೃಷ್ಣ ಕೊಲ್ಲೂರು ಹಾಗೂ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ವತಿಯಿಂದ ಹಣಕಾಸಿನ ನೆರವು ನೀಡುವ ಭರವಸೆ ಕೊಟ್ಟಿದ್ದಾರೆ. ಸುಕುಮಾರ ಶೆಟ್ಟಿ ಸೇರಿದಂತೆ ದತ್ತಿಯ ಸದಸ್ಯರು ಅದಕ್ಕಾಗಿ ಕಾಯುತ್ತಿದ್ದಾರೆ.

ಚರಂಡೀನೇ ಸರಿಯಿಲ್ಲ ಸ್ವಾಮಿ : ಈ ಎಲ್ಲಾ ದೊಡ್ಡ ಯೋಜನೆಗಳು ಹಾಗಿರಲಿ. ದೇವಾಲಯದ ಸುತ್ತಮುತ್ತಲ ಚರಂಡಿ ವ್ಯವಸ್ಥೆಯೇ ಖರಾಬಾಗಿದೆ ಎನ್ನುತ್ತಿದ್ದಾರೆ ಜನ. ಎಂಟು ವರ್ಷಗಳಿಂದ ಒಂದಲ್ಲ ಒಂದು ತೊಂದರೆಗೆ ಸಿಲುಕಿ ಮೊಟಕಾಗುತ್ತಿದ್ದ ಪ್ರಧಾನ ದ್ವಾರದ ಕೆಲಸ ಮುಗಿಯುತ್ತಿರುವುದು ಭಕ್ತಾದಿಗಳಲ್ಲೂ ಸಂತಸ ತಂದಿದೆ. ಅಂತಿಮ ಹಂತದಲ್ಲಾದರೂ ಯಾವುದೇ ತಕರಾರು ಬರದಿರಲಪ್ಪ ಎಂದು ದೇವಾಲಯ ದತ್ತಿಯ ಮಂದಿ ಮೂಕಾಂಬಿಕೆ ಮುಂದೆ ಕೈಮುಗಿಯುತ್ತಾ ನಿಂತಿದ್ದಾರೆ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X