ಸುಳ್ಳು ಆರೋಪಗಳನ್ನು ಮಾಡುವುದು ಅಪರಾಧ - ವಾಜಪೇಯಿ
ನವದೆಹಲಿ : ಸುಳ್ಳು ಆರೋಪಗಳನ್ನು ಮಾಡುವುದು ಅಪರಾಧ. ಅದಕ್ಕೆ ಕಿವಿ ಕೊಡುವುದು ಕೂಡ ಅಷ್ಟೇ ಅಪರಾಧ ಎಂದು ಪ್ರಧಾನಿ ವಾಜಪೇಯಿ ಹೇಳಿದ್ದಾರೆ.
ಶುಕ್ರವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ವಾಜಪೇಯಿ, ರಾಷ್ಟ್ರದ ಹಿತಾಸಕ್ತಿಗೆ ಮೊದಲ ಸ್ಥಾನ ಅನ್ನುವುದನ್ನು ಒತ್ತಿ ಹೇಳಿದರು. ರಾಷ್ಟ್ರದ ಭದ್ರತೆಗೆ ಧಕ್ಕೆಯಾಗಬಾರದು. ನಮ್ಮ ಸರ್ಕಾರ ಹಾಗೂ ರಾಜಕೀಯ ವ್ಯವಸ್ಥೆ ಶುದ್ಧವಾಗಿರಬೇಕು ಎನ್ನುವ ಆಶಯವನ್ನು ಅವರು ವ್ಯಕ್ತ ಪಡಿಸಿದರು.
ರಕ್ಷಣಾ ಒಪ್ಪಂದಗಳಲ್ಲಿನ ಅವ್ಯವಹಾರ ಆರೋಪ ಕುರಿತಂತೆ ಪ್ರಜಾಪ್ರತಿನಿಧಿಗಳ ಪರಮೋಚ್ಛ ವೇದಿಕೆಯಾದ ಸಂಸತ್ತಿನಲ್ಲಿ ಚರ್ಚಿಸದೆ ಗದ್ದಲ ಉಂಟು ಮಾಡುತ್ತಿರುವ ವಿರೋಧ ಪಕ್ಷಗಳ ನಡವಳಿಕೆಯ ಬಗೆಗೆ ವಿಷಾದವೆನಿಸುತ್ತಿದೆ. ಪ್ರತಿಯಾಂದು ಆರೋಪದ ಸತ್ಯಾಂಶಗಳನ್ನು ಜನರ ಮುಂದಿಡುವುದು ನಮ್ಮ ಜವಾಬ್ದಾರಿ. ಆದರೆ, ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು ಮರೆಯಬಾರದು. ವಿಡಿಯೋ ಚಿತ್ರೀಕರಣದಲ್ಲಿ ಯಾವುದೇ ಒಪ್ಪಂದಗಳು ದಾಖಲಾಗಿಲ್ಲ ಹಾಗೂ ಈ ಒಪ್ಪಂದಗಳಲ್ಲಿ ಯಾವುದೇ ಸಚಿವರು ಭಾಗಿಯಾಗಿಲ್ಲ ಎಂದು ವಾಜಪೇಯಿ ಸ್ಪಷ್ಟಪಡಿಸಿದರು.
ನಿಮ್ಮ ಕಣ್ಮುಂದೆಯೇ ಕಳೆದ ನನ್ನ 42 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥಹ ಆರೋಪವನ್ನು ಯಾವತ್ತೂ ಎದುರಿಸಿರಲಿಲ್ಲ . ನನ್ನ ಹಾಗೂ ನನ್ನ ಸಹೋದ್ಯೋಗಿಗಳ ವಿರುದ್ಧ ಗುರುತರ ಆರೋಪಗಳನ್ನು ಮಾಡಲಾಗಿದೆ. ಅನೇಕ ವರ್ಷಗಳ ನಂತರ ದೇಶದಲ್ಲಿ ಸ್ಥಿರತೆ ನೆಲೆಸಿದ ಸಂದರ್ಭದಲ್ಲಿ ಹಾಗೂ ಇಡೀ ವಿಶ್ವವೇ ಭಾರತದತ್ತ ಹೆಮ್ಮೆಯಿಂದ ನೋಡುತ್ತಿರುವಾಗ ಇಂಥಾ ಆರೋಪಗಳು ಕೇಳಿ ಬಂದಿವೆ ಎಂದು ಪ್ರಧಾನಿ ಕಳವಳ ವ್ಯಕ್ತಪಡಿಸಿದರು.
ಅವ್ಯವಹಾರಗಳಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗುವುದು ಖಚಿತ ಎಂದು ತಮ್ಮ ಭಾಷಣದಲ್ಲಿ ಆಶ್ವಾಸನೆ ನೀಡಿದ ಪ್ರಧಾನಿಗಳು, ನಾಲ್ಕು ತಿಂಗಳೊಳಗಾಗಿ ಸುಪ್ರಿಂ ಕೋರ್ಟ್ ನ್ಯಾಯಾಧೀಶರು ನಡೆಸುವ ತನಿಖೆ ಪೂರ್ಣವಾಗುವುದು ಎಂದರು. ವಿರೋಧ ಪಕ್ಷಗಳು ಪ್ರಜಾ ಸತ್ತಾತ್ಮಕವಾಗಿ ವರ್ತಿಸಬೇಕು. ಸಂಸತ್ತಿನ ಕಲಾಪಗಳು ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...