ಎನ್ಡಿಎ ಸರ್ಕಾರ ಈಗಲೋ ಆಗಲೋ- ಕಾಂಗ್ರೆಸ್ ಕ್ಷಣಗಣನೆ
ಬೆಂಗಳೂರು : ರಾಜಕೀಯದಲ್ಲಿ ಆಗಿರುವ ತೆಹಲ್ಕಾದಲ್ಲಿ ಅಲ್ಲಾಡುತ್ತಿರುವ ಎನ್ಡಿಎ, ಗದ್ದುಗೆಯಿಂದ ಇನ್ನು ಎರಡೇ ದಿನಗಳಲ್ಲಿ ಕುಸಿಯಲಿದೆ ಎಂದು ಕಾಂಗ್ರೆಸ್ ಈಗಾಗಲೇ ಕ್ಷಣಗಣನೆ ಮಾಡುತ್ತಿದೆ.
ತೆಹಲ್ಕಾ ಡಾಟ್ಕಾಂ 8 ತಿಂಗಳು ಜಾಲಾಡಿ, ಬಯಲಿಗೆ ತಂದಿರುವ ರಕ್ಷಣಾ ಅವ್ಯವಹಾರಗಳ ಹಿನ್ನೆಲೆಯಲ್ಲಿ ಎನ್ಡಿಎ ಸರ್ಕಾರ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪೂರ್ಣಾಧಿವೇಶನ ಮುಗಿಯುವ ಮುನ್ನ, ಅಂದರೆ ಮಾರ್ಚ್ 18ಕ್ಕೆ ಮುಂಚೆಯೇ ಉರುಳಿಬಿದ್ದರೂ ಆಶ್ಚರ್ಯವೇನಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಗದ್ದುಗೆ ಬಿಟ್ಟು ಕೆಳಗಿಯುವುದು ಬಿಟ್ಟು ಬೇರೆ ದಾರಿ ಇಲ್ಲ. ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ರಾಜೀನಾಮೆ ಕೊಟ್ಟದ್ದು ಸಾರ್ವಜನಿಕರ, ಮಾಧ್ಯಮಗಳ ಹಾಗೂ ರಾಜಕಾರಣಿಗಳ ಒತ್ತಡದಿಂದ. ಎನ್ಡಿಎ ಸರ್ಕಾರಕ್ಕೂ ಫರ್ನಾಂಡಿಸ್ಗೆ ಒದಗಿದ ಗತಿಯೇ ಆಗಲಿದೆ. ಅದು ಇನ್ನೆರಡೇ ದಿನಗಳಲ್ಲಿ ಉರುಳಿದರೂ ಯಾವುದೇ ಆಶ್ಚರ್ಯವಿಲ್ಲ ಎಂದು ಆಜಾದ್, ಟಿವಿ ಚಾನೆಲ್ಗಳಿಗೆ ತಿಳಿಸಿದರು.
ಭ್ರಷ್ಟ ಸರ್ಕಾರವನ್ನು ಹಿಂದೂಮುಂದೂ ನೋಡದೆ ಧಿಕ್ಕರಿಸಿ ಹೊರ ನಡೆದ ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿಯವರನ್ನು ಮೆಚ್ಚಬೇಕು. ಶುಕ್ರವಾರ ರಾತ್ರಿ ನಡೆಯಲಿರುವ ಸಭೆಯಲ್ಲಿ ಈ ರಾಜಕೀಯ ಬೆಳವಣಿಗೆಗಳೇ ಚರ್ಚೆಯ ವಸ್ತುವಾಗುತ್ತದಾದರೂ, ಪಕ್ಷ ಅಂದುಕೊಂಡಿರುವ ಕೃಷಿ, ವಿದೇಶಾಂಗ ನೀತಿ ಮತ್ತಿತರ ಪ್ರಮುಖ ವಿಷಯ ಕುರಿತ ಗೊತ್ತುವಳಿಗಳಿಗೆ ಅಂತಿಮ ರೂಪು ದೊರೆಯಲಿದೆ ಎಂದರು.
ನೈತಿಕ ಹೊಣೆ ಹೊತ್ತು ಕೆಳಗಿಳಿಯಲಿ : ಕರ್ನಾಟಕದ ಕಾಂಗ್ರೆಸ್ ಧುರೀಣ ಟಿ.ಎನ್.ನರಸಿಂಹ ಮೂರ್ತಿ ಮಾತನಾಡಿ, ನೈತಿಕ ಹೊಣೆ ಹೊತ್ತು ಎನ್ಡಿಎ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲೇಬೇಕು. ಲೋಕಸಭೆಗೆ ಹೊಸ ಚುನಾವಣೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಎನ್ಡಿಎಯಿಂದ ಹೊರಬಂದ ಮಮತಾ ಬ್ಯಾನರ್ಜಿಯವರಿಗೆ ಅವರು ಧನ್ಯವಾದಗಳನ್ನೂ ಅರ್ಪಿಸಿದರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...