ಕಂಪನದ ಕಪ್ಪು ಪರದೆಯ ಮುಂದೆ ಎಐಸಿಸಿಯನಿರಾಡಂಬರ ಅಧಿವೇಶನ
ಬೆಂಗಳೂರು : ಶನಿವಾರ ಪ್ರಾರಂಭವಾಗಲಿರುವ 81ನೇ ಅಖಿಲ ಭಾರತ ಕಾಂಗ್ರೆಸ್ ಪೂರ್ಣಾಧಿವೇಶನ ಅಬ್ಬರ- ಆಡಂಬರಗಳಿಲ್ಲದೆ ಸರಳವಾಗಿ ನಡೆಯಲಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಗಣ ರಾಜ್ಯೋತ್ಸವದಂದು ಗುಜರಾತ್ನಲ್ಲಿ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ನಗರದ ಅರಮನೆ ಆವರಣದಲ್ಲಿ ಅರಮನೆಯನ್ನೇ ನೆನಪಿಸುವ ತಾತ್ಕಾಲಿಕ ಗೋಡೆಗಳನ್ನು, ಬೃಹತ್ ವೇದಿಕೆಯನ್ನು ಕಟ್ಟಿ ಕಳೆಗಟ್ಟಿಸಿ, ಅದಕ್ಕೆ ರಾಜೀವ್ಗಾಂಧಿ ನಗರ ಎಂದು ನಾಮಕರಣ ಮಾಡಲಾಗಿದೆ. ಆದರೆ ಈ ಬಾರಿಯ ಪೂರ್ಣಾಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ಮೆರವಣಿಗೆ ಮಾಡುವ ಸಂಪ್ರದಾಯವನ್ನೂ ಕೈಬಿಡಲಾಗಿದೆ. ಅಷ್ಟೇ ಅಲ್ಲ , ನಗರದ ತುಂಬಾ ತೂಗಾಡಬೇಕಿದ್ದ ಕಾಂಗ್ರೆಸ್ ಧುರೀಣರ ಬ್ಯಾನರ್ಗಳ ಸಂಖ್ಯೆಯಲ್ಲೂ ಇಳಿಮುಖ ಕಂಡುಬಂದಿದೆ.
ಫೆಬ್ರವರಿಯಲ್ಲೇ ನಡೆಯಬೇಕಾಗಿದ್ದ ಅಧಿವೇಶನವನ್ನು ಭಯಾನಕ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಮಾರ್ಚಿಗೆ ಮುಂದೂಡಿದ್ದನ್ನು ಇಲ್ಲಿ ಸ್ಮರಿಸಬಹುದು. ದೇಶ ಕಂಡ ದೊಡ್ಡ ದುರಂತದ ಛಾಯೆ ಇನ್ನೂ ಮಾಸಿಲ್ಲದ ಕಾರಣ ಅತಿಯಾದ ಆಚರಣೆ ಕೂಡದೆಂದು ಕಾಂಗ್ರೆಸ್ ತೀರ್ಮಾನಿಸಿದೆ. ಸಾಮಾನ್ಯವಾಗಿ ಫೋರ್ ಸ್ಟಾರ್ ಅಥವಾ ಫೈವ್ ಸ್ಟಾರ್ ಹೊಟೇಲುಗಳಲ್ಲೇ ನಾಯಕರಿಗೆ ತಂಗಲು ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಪಕ್ಷ ವಸತಿ ವ್ಯವಸ್ಥೆಗೆ ಅಷ್ಟೊಂದು ಹಣ ಖರ್ಚು ಮಾಡದೆ, ಸುಮಾರಾದ ಹೊಟೇಲುಗಳಲ್ಲೇ ವಸತಿ ವ್ಯವಸ್ಥೆ ಮಾಡಿದೆ.
ಅಧಿವೇಶನದ ಸಿದ್ಧತೆಯಲ್ಲಿ ಮುಳುಗಿ ಹೋಗಿರುವ ಪಕ್ಷದ ಕಾರ್ಯಕರ್ತರು ಯುಎನ್ಐ ವರದಿಗಾರರಿಗೆ ಈ ವಿಷಯಗಳನ್ನು ವಿವರಿಸಿದ್ದಾರೆ. ಅಧಿವೇಶನದಲ್ಲಿ ಭಾರೀ ಭೋಜನ ಇರುವುದಿಲ್ಲವಂತೆ. ಅದರಲ್ಲೂ ಸರಳತೆ ಕಾಯ್ದುಕೊಳ್ಳುವುದಾಗಿ ಕಾರ್ಯಕರ್ತರು ಹೇಳಿದ್ದಾರೆ.
(ಯುಎನ್ಐ)
ಮುಖಪುಟ / ಇವತ್ತು... ಈ ಹೊತ್ತು...