ಸದ್ಯದಲ್ಲೇ ಮೈಸೂರು -ಬೆಂಗಳೂರು ಜೋಡಿ ರಸ್ತೆ -ಎಸ್ಸೆಂ ಕೃಷ್ಣ
ಬೆಂಗಳೂರು: ಹಲವು ವಿರೋಧಗಳ ನಡುವೆಯೂ ಮೈಸೂರು ಬೆಂಗಳೂರು ನಡುವೆ ನಿರ್ಮಿಸಲು ಉದ್ದೇಶಿಸಿದ್ದ ಕಾರಿಡಾರ್ ರಸ್ತೆ ಯೋಜನೆಯನ್ನು ಕೊನೆಗೂ ಕೈ ಬಿಡಲಾಗಿದೆ. ಸದ್ಯಕ್ಕೆ ಈಗಿರುವ ರಾಜ್ಯ ಹೆದ್ದಾರಿಯನ್ನೇ ಜೋಡಿ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಬುಧವಾರ ಹೇಳಿದ್ದಾರೆ.
ಅವರು ಬುಧವಾರ ವಿಧಾನ ಸೌಧದ ಬಾಂಕ್ವೆಟ್ ಹಾಲ್ನಲ್ಲಿ ರಾಜ್ಯ ಹೆದ್ದಾರಿಗಳ ನಿರ್ವಹಣಾ ಕಾಮಗಾರಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾರಿಡಾರ್ ರಸ್ತೆಯಲ್ಲಿ ಸಂಚರಿಸಲು ಸುಂಕ ತೆರಬೇಕು. ಕಾರಿಡಾರ್ ರಸ್ತೆಗೆ ಇನ್ನೂ ಅನೇಕ ವಿಭಾಗಗಳಿಂದ ಅನುಮತಿ ಸಿಗಬೇಕು. ಎಲ್ಲ ಅಡಚಣೆ, ವಿರೋಧಗಳನ್ನು ನಿವಾರಿಸಿಕೊಂಡು ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ತುಂಬಾ ಸಮಯ ಬೇಕಾಗುತ್ತದೆ. ಅಷ್ಟು ಹೊತ್ತು ಕಾಯುವ ವ್ಯವಧಾನ ಸರಕಾರಕ್ಕಿಲ್ಲ. ಆದ್ದರಿಂದ ಏಳು ವರ್ಷದ ಖಾತ್ರಿ ಮೇಲೆ ಪ್ರಸ್ತುತ ಇರುವ ಮೈಸೂರು ಬೆಂಗಳೂರು ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯ ಮಂತ್ರಿಗಳು ಹೇಳಿದರು.
ರಸ್ತೆ ನಿರ್ಮಾಣ ಅಥವಾ ಯಾವುದೇ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಬರುವ ನಿಟ್ಟಿನಲ್ಲಿ ಗುತ್ತಿಗೆದಾರನೊಬ್ಬ ಒಂದು ಕಾಮಗಾರಿಯನ್ನು ಪೂರೈಸಿದ ಮೂರು ವರ್ಷಗಳ ನಂತರ, ಆ ಕಾಮಗಾರಿಯ ಮೇಲೆ ಮೂರು ವರ್ಷದ ಖಾತ್ರಿ ನೀಡಬೇಕಾಗುತ್ತದೆ ಎಂದು ಕೃಷ್ಣ ಹೇಳಿದರು.
(ಇನ್ಫೋ ವಾರ್ತೆ)