ಅಪರೂಪದ ಗೆಲುವಿಗೆ ಹರ್ಷದೋಕುಳಿ, ಬೀದಿಗಿಳಿದ ಬೆಂಗಳೂರು
ಬೆಂಗಳೂರು : ಆಸ್ಟ್ರೇಲಿಯಾದ ಸತತ 16 ಟೆಸ್ಟ್ಗಳ ಗೆಲುವಿನ ಓಟಕ್ಕೆ ಕಡಿವಾಣ ಹಾಕಿ ಭಾರತ ಸಾಧಿಸಿದ ಅಪರೂಪದ ಗೆಲುವಿಗೆ ಇಡೀ ಬೆಂಗಳೂರೇ ಬೀದಿಗಿಳಿದು ಸಂಭ್ರಮಿಸುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲೂ ಕ್ರಿಕೆಟ್ ಅಭಿಮಾನಿಗಳು ವಿಜಯೋತ್ಸವ ಆಚರಿಸುತ್ತಿದ್ದಾರೆ.
ಕಾಂಗರೂ ಪಡೆಯ ಕೊನೆಯ ವಿಕೆಟ್ ಉರುಳಿದ್ದೇ ತಡ, ಬೆಂಗಳೂರಿನ ಬೀದಿಗಳಲ್ಲಿ ಪಟಾಕಿಗಳ ಸಿಡಿತದ ಮೊರೆತ ಪ್ರಾರಂಭವಾಯಿತು. ಅನೇಕ ಅಭಿಮಾನಿಗಳು ಬೀದಿಗಿಳಿದು ನೃತ್ಯ ಮಾಡಲು ಆರಂಭಿಸಿದರು. ಪರಸ್ಪರ ಸಿಹಿ ಹಂಚಿಕೊಳ್ಳುತ್ತಾ ಸಂಭ್ರಮಿಸಿದರು. ಇದೇ ಸಂಭ್ರಮ ದೇಶದ ಇತರ ನಗರಗಳಲ್ಲೂ ಕಂಡು ಬಂದಿದೆ ಎಂದು ಯುಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅದ್ಭತ ಗೆಲುವು : ಭಾರತ ಸಾಧಿಸಿದ ಗೆಲುವು ಟೆಸ್ಟ್ ಕ್ರಿಕೆಟ್ನಲ್ಲೇ ಅತ್ಯದ್ಭುತವಾದ್ದು ಎಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ನ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಬಣ್ಣಿಸಿದ್ದಾರೆ. ಫಾಲೋಆನ್ ಪಡೆದ ನಂತರ ತಂಡ ಅತ್ಯುತ್ತಮ ಪ್ರತಿರೋಧದ ಹೋರಾಟ ನೀಡಿತು. ಇದರಿಂದಾಗಿ ಚೆನ್ನೈನಲ್ಲಿನ ಅಂತಿಮ ಟೆಸ್ಟ್ಗೆ ತಂಡದ ಆತ್ಮ ವಿಶ್ವಾಸ ಇಮ್ಮಡಿಸಿದೆ ಎಂದು ಬ್ರಿಜೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ಪರ ವಿವಿಎಸ್ ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಅತ್ಯುತ್ತಮ ಪ್ರದರ್ಶನ ನೀಡಿದರು. ಹರ್ಭಜನ್ ಸಿಂಗ್ರ 13 ವಿಕೆಟ್ಗಳ ಸಾಧನೆಯೂ ಗಮನಾರ್ಹ. ಭಾರತದ ಗೆಲುವಿನಲ್ಲಿ ಈ ತ್ರಿವಳಿಗಳ ಪಾತ್ರ ಮುಖ್ಯವಾದುದು ಎಂದು ಬ್ರಿಜೇಶ್ ಹೇಳಿದ್ದಾರೆ.
(ಇನ್ಫೋ ವಾರ್ತೆ/ ಯುಎನ್ಐ)
ಮುಖಪುಟ / ಇವತ್ತು... ಈ ಹೊತ್ತು...