ಮಾರುತಿ ವ್ಯಾನ್ ಡಿಕ್ಕಿ, ಸೈಕಲ್ ಸವಾರ ಸಾವು,ತುರುವೇಕೆರೆ ಪ್ರಕ್ಷುಬ್ಧ
ತುರುವೇಕೆರೆ : ತುಮಕೂರು ಜಿಲ್ಲೆಯ ತುರುವೇಕೆರೆಯ ಕರ್ನಾಟಕ ಸಾರಿಗೆ ಇಲಾಖೆಯ ಡಿಪೋ ಬಳಿ ಸಂಭವಿಸಿದ ಸೈಕಲ್ ಹಾಗೂ ಮಾರುತಿ ವ್ಯಾನ್ ಮುಖಾಮುಖಿ ಡಿಕ್ಕಿಯಲ್ಲಿ ಸೈಕಲ್ ಸವಾರ ಹಾಗೂ ಕೊಬ್ಬರಿ ವ್ಯಾಪಾರಿ ಅಣ್ಣೇಗೌಡ (55) ಸ್ಥಳದಲ್ಲೇ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿತ್ತು.
ಈ ವ್ಯಾನ್ ವಿಜಯಾಬ್ಯಾಂಕಿನ ವ್ಯವಸ್ಥಾಪಕ ಉಮೇಶ್ ಎಂಬುವವರಿಗೆ ಸೇರಿದ್ದಾಗಿದ್ದು, ಬ್ಯಾಂಕಿನ ನೌಕರ ಅಶೋಕ್ ವಾಹನ ಓಡಿಸುತ್ತಿದ್ದರು ಎಂದು ತಿಳಿದುಬಂದಿದೆ. ವಿಷಯ ತಿಳಿದ ಕೂಡಲೇ ಪಟ್ಟಣದ ಬಳಿಯ ಗೋಣಿ ತುಮಕೂರಿನ ಸಾವಿರಾರು ನಾಗರಿಕರು ಪೊಲೀಸ್ ಠಾಣೆಯ ಎದುರು ಜಮಾಯಿಸಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದರು. ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಆದರೆ, ಗ್ರಾಮಸ್ಥರು ಆರೋಪಿಯನ್ನು ಬಂಧಿಸುವವರೆಗೆ ಶವದ ಮರಣೋತ್ತರ ಪರೀಕ್ಷೆಗೆ ಆಸ್ಪದ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಪೊಲೀಸ್ ಠಾಣೆಯ ಎದುರು ರಸ್ತೆ ತಡೆ ಚಳವಳಿಯನ್ನೂ ನಡೆಸಿದರು. ವ್ಯಾನ್ ಮಾಲಿಕರು ಕ್ಷಮೆ ಯಾಚಿಸಿ, ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದರು.
ತಾಲೂಕಿನ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮಧ್ಯೆ ಪ್ರವೇಶಿಸಿ, ಉದ್ರಿಕ್ತ ನಾಗರಿಕರನ್ನು ಸಮಾಧಾನಪಡಿಸಿದರು. ತುರುವೇಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಶೋಧದಲ್ಲಿ ತೊಡಗಿದ್ದಾರೆ.