ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಮರೆಯಾಗುತ್ತಿರುವ ಮೈಸೂರು ಸ್ಮಾರಕಗಳು

By Staff
|
Google Oneindia Kannada News

ಮೈಸೂರು: ಕರ್ನಾಟಕ ಎಂದು ಮರು ನಾಮಕರಣವಾಗುವ ಮೊದಲು ನಮ್ಮ ಮೈಸೂರು ರಾಜ್ಯವಾಗಿತ್ತು. ಈಗ ಬೆಂಗಳೂರು ರಾಜ್ಯದ ರಾಜಧಾನಿ. ಆದರೆ ಹಿಂದಿನಿಂದ ರಾಜ್ಯದ ರಾಜಧಾನಿ ಮೈಸೂರು. ಒಡಯರಾಳಿದ ಮೈಸೂರು ಇಂದು ರಾಜ್ಯದ ರಾಜಧಾನಿ ಅಲ್ಲವಾದರೂ ಪರಂಪರಾಗತ ವೈಭವದ ನಗರ. ಸಾಂಸ್ಕೃತಿಕ ನಗರ. ಮೈಸೂರಿನ ಹಿರಿಮೆ ಕರ್ನಾಟಕದ ಇತಿಹಾಸದ ಪುಟಗಳಲ್ಲಿ ತನ್ನದೆ ಆದ ಮಹತ್ವದ ಸ್ಥಾನವನ್ನು ಹೊಂದಿದೆ.

ಮೈಸೂರು ಒಂದು ಪ್ರವಾಸಿ ತಾಣ. ಭವ್ಯ ಹಾಗೂ ಸುಂದರ ನಗರ. ಕರ್ನಾಟಕ ಹಿರಿಮೆಯನ್ನು ಕಡಲಾಚೆ ಪಸರಿಸಿದ ಖ್ಯಾತಿ ಮೈಸೂರು ಹಾಗೂ ಮೈಸೂರು ಮಲ್ಲಿಗೆಗೆ ಸಲ್ಲುತ್ತದೆ.

ಭವ್ಯವೂ ಮನೋಹರವೂ ಆದ ಅರಮನೆ, ಒಡೆಯರ ಪುತ್ಥಳಿಗಳುಳ್ಳ ಚೌಕಗಳು, ಗಡಿಯಾರದ ಗೋಪುರ ಎಲ್ಲ ದಾರಿಗರನ್ನು ಅರೆಕ್ಷಣ ನಿಲ್ಲಿಸಿ ತನ್ನ ಸೊಬಗನ್ನು ಸವಿಯುವಂತೆ ಮಾಡುವಂತಹ ಅಪೂರ್ವ ಶಿಲ್ಪಗಳು.

ಮೈಸೂರಿನ ಪರಂಪರೆಯ ಸ್ಮಾರಕಗಳಲ್ಲಿ ರಸ್ತೆಬದಿಯಲ್ಲಿ ಚಳಿ ಮಳೆ ಗಾಳಿಗೆ ಮೈಯಾಡ್ಡಿಯೂ ನೂರಾರು ವರ್ಷಗಳಿಂದ ಅಚಲವಾಗಿ ನಿಂತ ವಿದ್ಯುತ್‌ ಕಂಬಗಳು.

ಮೈಸೂರನ್ನು ಆಳಿದ ಒಡಯರು, ದೂರದೃಷ್ಟಿಯಿಂದ ಹಾಗೂ ನಗರವನ್ನು ಸುವ್ಯವಸ್ಥಿತವಾಗಿ ಹಾಗೂ ಸುಂದರವಾಗಿ ಕಂಗೊಳಿಸುವಂತೆ ಮಾಡಲು ಅಂದು ನೆಟ್ಟ ಕಲಾತ್ಮಕ ವಿದ್ಯುತ್‌ ಕಂಬಗಳು ಮೈಸೂರಿನ ಭವ್ಯ ಪರಂಪರೆಗೆ ಮತ್ತಷ್ಟು ಮೆರುಗು ನೀಡಿವೆ.

ನಾಲ್ವಡಿ ಕೃಷ್ಣರಾಜ ಒಡೆಯರು ಬ್ರಿಟನ್‌ನಿಂದ ತಂದು ಮೈಸೂರು ನಗರದ ರಸ್ತೆಗಳ ಅಂಚಿನಲ್ಲಿ ನೆಡಿಸಿದ ಈ ಸುಂದರ ಕಂಬಗಳು ಇಂದು ಕಣ್ಮರೆಯಾಗುತ್ತಿವೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಇದನ್ನು ರಕ್ಷಿಸಬೇಕಾದ ನಗರ ಪಾಲಿಕೆಯೇ ಇದರ ಅವಸಾನಕ್ಕೆ ಕಾರಣವಾಗಿದೆ.

ಸಂವಿಧಾನದ 74ನೇ ತಿದ್ದುಪಡಿಯ 12ನೇ ಪರಿಚ್ಛೇದದ ರೀತ್ಯ ನಗರದ ಸ್ಮಾರಕಗಳನ್ನು ಉಳಿಸುವುದು ನಗರಪಾಲಿಕೆಯ ಆದ್ಯ ಕರ್ತವ್ಯ.

ಆದರೆ ಮೈಸೂರಿನ ನಗರ ಪಾಲಿಕೆ ಈ ಪರಂಪರೆಯ ಸ್ಮಾರಕಗಳನ್ನು ರಕ್ಷಿಸುವ ಬದಲು ಭಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ.

ಆಲ್ಬರ್ಟ್‌ ವಿಕ್ಟರ್‌ ರಸ್ತೆಯಲ್ಲಿ ದ್ದ ಇಂತಹ ಪುರಾತನ ಅಲಂಕಾರಿಕ ಕಂಬಗಳ ಜಾಗದಲ್ಲಿ ಇಂದು ಉದ್ದನೆಯ ಕೊಳವೆ ಮಾದರಿಯ ಕಂಬಗಳು ಎದ್ದು ನಿಂತಿವೆ. ಗಾಳಿ ಮಳೆಗೆ ಬಗ್ಗುವ ಇವುಗಳು ಅಲ್ಪಾಯುಗಳು. ಆದರೂ ಪಾಲಿಕೆ ಈ ಕಾರ್ಯದಲ್ಲಿ ತೊಡಗಿದೆ.

ಅರಮನೆಯ ಸುತ್ತಮುತ್ತ ಅಂದರೆ ನ್ಯೂಸ್ಟಾಚ್ಯೂ ವೃತ್ತದಿಂದ ಹಾರ್ಡಿಂಚ್‌ ವೃತ್ತದ ವರೆಗೆ ಈ ಕಂಬಗಳು ಕಂಗೊಳಿಸುತ್ತಿದ್ದವು. ಇವುಗಳನ್ನು ಬದಲಿಸಲು ಪಾಲಿಕೆ ಹೊರಟಾಗ ಮೈಸೂರು ಸಾಂಸ್ಕೃತಿಕ ಪರಂಪರೆ ಪ್ರತಿಷ್ಠಾನ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆಗ ವಿಧಿಯಿಲ್ಲದೆ ಆಗಿನ ಆಯುಕ್ತರು ಕೆಲಸವನ್ನನು ಸ್ಥಗಿತಗೊಳಿಸುವ ಭರವಸೆ ನೀಡಿದರು. ಆದರೆ ಅದರಂತೆ ನಡೆದುಕೊಳ್ಳಲಿಲ್ಲ.

ಈ ಜಾಗದಲ್ಲಿ ಕೊಳವೆ ಮಾದರಿಯ ಕಂಬಗಳು ತಲೆಎತ್ತಿದವು. ಸಾಲದೆಂಬಂತೆ ಪಾದಚಾರಿ ರಸ್ತೆಗೆ ಅಳವಡಿಸಿದ ಕಟೆಕಟೆಗಳು ಆ ರಸ್ತೆಯ ಭವ್ಯ ಪರಂಪರೆ ಹಾಗೂ ಸೌಂದರ್ಯವನ್ನೇ ಹಾಳುಮಾಡಿತು. ಕಲಾತ್ಮಕ ಹಾಗೂ ಅಲಂಕಾರಿಕವಾದ ಹಾಗೂ ಗಟ್ಟುಮುಟ್ಟಾದ ಪುರಾತನ ಕಂಬಗಳು ಪಾಲಿಕೆಯ ಆವರಣದಲ್ಲಿ ತುಕ್ಕುಹಿಡಿಯುವಂತಾಯ್ತು.

ಪರಂಪರೆಯ ಹಿರಿಮೆ ಅರಿಯದ ಮಂದಿಯ ಕೈಗೆ ಅಧಿಕಾರ ಸಿಕ್ಕರೆ ಇನ್ನೇನಾದೀತು ಎಂಬುದು ಇಲ್ಲಿನ ನಾಗರಿಕರ ಪ್ರಶ್ನೆ.

ದೊರೆತನವು ನಾಡ ನೀಚಂಗೆ

ದೊರೆತರೆ ಧರೆಯೆಲ್ಲ ಕೆಡಕು

ಸರ್ವಜ್ಞ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X