ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸಂತನ ಸ್ವಾಗತಿಸಲು ತವಕಿಸುತ್ತಿದೆ ಪ್ರಕೃತಿ

By Staff
|
Google Oneindia Kannada News

ಬೆಂಗಳೂರು : ಚೈತ್ರದ ಆಗಮನಕ್ಕೆ ಉಳಿದಿರುವುದು ಕೇವಲ 20 ದಿನ ಮಾತ್ರ. ಮಾರ್ಚ್‌ 25ರಂದು ಯುಗಾದಿ. ಅದಕ್ಕೆ ಮೊದಲೇ ಚೈತ್ರವ ಸ್ವಾಗತಿಸುವ ರಂಗು ರಂಗಿನ ಹೋಳಿ. ಮುಂದಿನ ಶುಕ್ರವಾರದ ಹೋಳಿಯ ಹುಣ್ಣಿಮೆಗೆ ಬಣ್ಣಗಳು ಮಾರುಕಟ್ಟೆಗೆ ಬಂದಿದ್ದರೆ, ಮಾಮರದಿ ಕುಳಿತು ಕೋಗಿಲೆ ಕುಹೂ ಕುಹೂ ಎನ್ನುತ್ತಿವೆ.

ಮಾವಿನ ಮರದಲ್ಲಿ ಚಿಗುರೊಡೆದಿದೆ. ಹಸಿರೆಲೆಗಳ ಮರೆಯಲ್ಲಿ ಮಿಡಿಗಾಯಿಗಳು ಮಿನುಗುತ್ತಿವೆ. ಎಲ್ಲಿ ನೋಡಿದರೂ ಹಸಿರು. ಹಣ್ಣೆಲೆಗಳೆಲ್ಲವೂ ಶಿಶಿರದ ಚಳಿಗೆ ಉದುರಿ, ಚೈತ್ರದ ಹೊಸತನಕ್ಕೆ ಹೊಸತಾಗಿ ಚಿಗುರಿ ಕಣ್ಮನ ಸೆಳೆಯುತ್ತಿವೆ. ಎಳೆ ಹಸಿರಿನ ಅನುಭವ ಕಣ್ಣಿಗೆ ಆಹ್ಲಾದ ನೀಡುತ್ತಿದೆ. ಋತುರಾಜ ವಸಂತನ ಬರಮಾಡಿಕೊಳ್ಳಲು ಪ್ರಕೃತಿ ಹಾತೊರೆಯುತ್ತಿದೆ.

ಈ ಮಧ್ಯೆ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಕರಾವಳಿಯ ಕೆಲವು ಭಾಗದಲ್ಲಿ ಉಷ್ಣಾಂಶ ಏರಿದೆ. ಮಿಕ್ಕ ಕಡೆ ಅಲ್ಪ ಬದಲಾವಣೆ ಗೋಚರಿಸಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಏರಿದೆ. ರಾಜ್ಯದ ಅತಿ ಹೆಚ್ಚು ತಾಪಮಾನ 37.5 ಡಿಗ್ರಿ ಸೆಲ್ಸಿಯಸ್‌ ಶಿವಮೊಗ್ಗದಲ್ಲೂ, ಅತಿ ಕನಿಷ್ಠ ತಾಪಮಾನ 16.6 ಡಿಗ್ರಿ ಸೆಲ್ಸಿಯಸ್‌ ಬೆಳಗಾವಿಯಲ್ಲೂ ಇತ್ತು.

ಮುನ್ಸೂಚನೆಯ ಪ್ರಕಾರ ರಾಜ್ಯಾದ್ಯಂತ ಮುಂದಿನ 24 ಗಂಟೆಗಳ ಅವಧಿಯಲ್ಲಿ ಒಣಹವೆಯೇ ಇರಲಿದೆ. ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಶುಭ್ರ ಆಕಾಶ ಇದ್ದು, ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X