ರಾಜ್ಯ ವಿದ್ಯುತ್ ಮಂಡಳಿ ಕಾಯಕಲ್ಪಕ್ಕೆ ತಜ್ಞರ ಸಮಿತಿ ರಚನೆ : ಕೃಷ್ಣ
ಮೈಸೂರು : ಕರ್ನಾಟಕ ರಾಜ್ಯ ವಿದ್ಯುತ್ ಮಂಡಳಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಸಲಹೆ - ಮಾರ್ಗದರ್ಶನ ಸೂಚಿಸಲು ತಜ್ಞರ ಸಮಿತಿಯಾಂದನ್ನು ರಚಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕೇರಳ ಮೂಲದ ಮಾತಾ ಅಮೃತಾನಂದಮಯಿ ಮಠದ ಕಂಪ್ಯೂಟರ್ ಅಕಾಡಮಿ ಮತ್ತು ದತ್ತಿ ಆಸ್ಪತ್ರೆಯ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಈ ಸಮಿತಿಯು ರಾಜ್ಯ ವಿದ್ಯುತ್ ಮಂಡಳಿಗೆ ಕಾಯಕಲ್ಪ ನೀಡುವ ಬಗ್ಗೆ ಕೂಡ ಅಧ್ಯಯನ ಮಾಡಲಿದೆ ಎಂದರು.
ವಿದ್ಯುತ್ ಕ್ಷೇತ್ರದಲ್ಲಿ ಅದರಲ್ಲೂ ಕೃಷಿಗೆ ಒದಗಿಸುವ ವಿದ್ಯುತ್ಗೆ ಹಾಗೂ ಸಬ್ಸಿಡಿ ಕಡಿತಗೊಳಿಸುವ ಸಂಬಂಧ ರಾಷ್ಟ್ರೀಯ ಒಮ್ಮತ ಮೂಡುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಶನಿವಾರ ದೆಹಲಿಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಏಕರೂಪದ ವಿದ್ಯುತ್ ದರ ವಿಧಿಸುವ ಅಭಿಪ್ರಾಯ ಮೂಡಿತೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಈ ಎಲ್ಲ ವಿಷಯಗಳೂ ತಜ್ಞರ ಸಮಿತಿಯ ಅಧ್ಯಯನದಲ್ಲಿ ಅಡಕವಾಗಿರುತ್ತವೆ. ಕುಸಿಯುತ್ತಿರುವ ರಾಜ್ಯ ವಿದ್ಯುತ್ ಮಂಡಳಿಯನ್ನು ಕೈಹಿಡಿದು ಮೇಲೆತ್ತುವುದು ಹೇಗೆ ಎಂಬುದೇ ಈಗ ನಮ್ಮ ಮುಂದಿರುವ ಪ್ರಮುಖ ಪ್ರಶ್ನೆ ಎಂದರು.
ಇದಕ್ಕೂ ಮುನ್ನ ಶಿಲಾನ್ಯಾಸ ಸಂದರ್ಭದಲ್ಲಿ ಮಾತನಾಡಿದ ಅವರು ಕೆಳವರ್ಗದ ಹಾಗೂ ಶೋಷಿತ ಜನರ ಜೀವನಮಟ್ಟ ಸುಧಾರಿಸಲು ಶ್ರಮಿಸುವ ಸಂಸ್ಥೆಗಳಿಗೆ ನೆರವಾಗಲು ರಾಜ್ಯ ಸರಕಾರ ಬದ್ಧವಾಗಿದೆ ಎಂದರು. ಫಲಾನುಭವಿಗಳಿಗೆ ಅಮೃತ ಕುಟೀರಂನ ಬೀಗದ ಕೈಗಳನ್ನು ಅವರು ಈ ಸಂದರ್ಭದಲ್ಲಿ ವಿತರಿಸಿದರು.
ಮಾತಾ
ಅಮೃತಾನಂದಮಯಿ
ಸಂಸ್ಥೆಯು
ಪ್ರಥಮ
ಹಂತದಲ್ಲಿ
ಇಂತಹ
1000
ಮನೆಗಳು
ಹಾಗೂ
ಅತ್ಯಾಧುನಿಕ
ಆಸ್ಪತ್ರೆಯನ್ನು
ನಿರ್ಮಿಸುವ
ಯೋಜನೆ
ರೂಪಿಸಿದೆ.
ಈಗಾಗಲೇ
300
ಮನೆಗಳನ್ನು
ನಿರ್ಮಿಸಿ
ಹಿಂದುಳಿದ
ವರ್ಗದ
ಜನರಿಗೆ
ದಾನವಾಗಿ
ನೀಡಿದೆ.
ಬೇಸಿಗೆಯಲ್ಲಿ ವಿದ್ಯುತ್ ಕಡಿತ: ಪ್ರಸಕ್ತ ಬೇಸಿಗೆಯಲ್ಲಿ ವಿದ್ಯುತ್ ಕಡಿತ ಮಾಡುವ ಸೂಚನೆಯನ್ನೂ ಮುಖ್ಯಮಂತ್ರಿ ಕೃಷ್ಣ ಈ ಸಂದರ್ಭದಲ್ಲಿ ನೀಡಿದರು. ರಾಜ್ಯದ ವಿವಿಧ ವಿದ್ಯುತ್ ಉತ್ಪಾದನೆ ಕೇಂದ್ರಗಳಲ್ಲಿ ಉತ್ಪಾದನಾ ಪ್ರಮಾಣ ಹಾಗೂ ಪೂರೈಕೆಯಲ್ಲಿ ಏರಿಳಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗುತ್ತದೆ ಎಂದೂ ಅವರು ಹೇಳಿದರು. (ಯು.ಎನ್.ಐ)
ಮುಖಪುಟ / ಇವತ್ತು... ಈ ಹೊತ್ತು...