‘ಶಿಕ್ಷಣ ನಮ್ಮ ಹಕ್ಕು’ ಪಟ್ಟು ಹಿಡಿದು ಕೇಳುವ ಆ ದಿನ ದೂರವಿಲ್ಲ
ಮೈಸೂರು : ಶಿಕ್ಷಣವನ್ನು ಮೂಲಭೂತ ಹಕ್ಕುಗಳ ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ ಎಂದು ಸಾರ್ವಜನಿಕ ವಿತರಣಾ ಖಾತೆಯ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಶನಿವಾರ ಹೇಳಿದ್ದಾರೆ.
ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸ್ವರ್ಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಚಿವರು, ಶಿಕ್ಷಣ ನಮ್ಮ ಹಕ್ಕು ಎಂದು ಜನ ಹೇಳುವಂತಾಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ, ನಡೆಯುತ್ತಿವೆ. ವಿಶ್ವದ ನಿರಕ್ಷರ ಕುಕ್ಷಿ ದೇಶಗಳ ಯಾದಿಯಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಭಾರತ ಮೊದಲ ಮೂರು ರ್ಯಾಂಕ್ ಪಡೆದಿವೆ. ಸಿರಿವಂತರಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ. ಬಡವರಿಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಎಂಬ ಜನಾಭಿಪ್ರಾಯ ನಮ್ಮಲ್ಲಿ ಬೇರೂರಿದೆ. ಸರ್ಕಾರ ಇದನ್ನು ಸುಳ್ಳಾಗಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಣಾಳಿಕೆಯಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಚಿವರು ಕರೆ ಕೊಟ್ಟರು.
ರಮಾದೇವಿ ಉವಾಚ : ಸುವರ್ಣ ಮಹೋತ್ಸವದ ಸ್ಮರಣಾರ್ಥ ನಿರ್ಮಿಸಲಾಗುವ ಸಭಾಂಗಣದ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದ ರಾಜ್ಯಪಾಲರಾದ ವಿ.ಎಸ್.ರಮಾದೇವಿ, ಸಚಿವ ಶ್ರೀನಿವಾಸ ಪ್ರಸಾದ್ ಹೇಳಿಕೆಯನ್ನು ಸಮರ್ಥಿಸಿದರು. ನಮ್ಮ ದೇಶದ ಜನರಿಗೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗೆಗೆ ಅರಿವೇ ಇಲ್ಲ. ಎಲ್ಲಿಯವರೆಗೆ ನಾಡಾಡಿಗಳಿಗೆ ಮೂಲಭೂತ ವಿಷಯಗಳು ಗೊತ್ತಾಗುವುದಿಲ್ಲ , ಅಲ್ಲಿವರೆಗೆ ದೇಶಕ್ಕೆ ತಾವೇನು ಮಾಡಬಹುದು ಎಂಬುದರ ಅರಿವೂ ಅವರಲ್ಲಿ ಮೂಡದು. ನಮ್ಮ ರಾಜ್ಯದ ಪ್ರತಿಶತ 70 ಶಿಕ್ಷಣ ಸಂಸ್ಥೆಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವ ಮಠಾಧೀಶರಿಗೆ ವಂದನೆಗಳು. ಸರ್ಕಾರಿ ಶಾಲೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವನ್ನು ಶಿಕ್ಷಣ ಸಚಿವರು ಸುಳ್ಳಾಗಿಸಬೇಕು ಎಂದು ಕರೆ ಕೊಟ್ಟರು.
ಗೊತ್ತು ಗುರಿಯಿಲ್ಲದ ಶಿಕ್ಷಣ : ಭಾರತದ ಶಿಕ್ಷಣ ವ್ಯವಸ್ಥೆಗೆ ನಿರ್ದಿಷ್ಟ ಗೊತ್ತು ಗುರಿಯಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ತಾವು ಯಾಕೆ ಓದುತ್ತಿದ್ದೇವೆ ಅನ್ನೋದೇ ಗೊತ್ತಿರುವುದಿಲ್ಲ. ಶಿಕ್ಷಣವನ್ನು ಅರ್ಥಪೂರ್ಣವನ್ನಾಗಿಸಬೇಕು. ವಿದ್ಯಾರ್ಥಿಗಳಿಗೆ ಮೊದಲು ದಿಕ್ಕು- ದಿಸೆ ತೋರಿಸಿ, ನೀವು ಓದಬೇಕಾದ್ದು ಇಂಥದ್ದಕ್ಕೆ ಎಂದು ಮನವರಿಕೆ ಮಾಡಿಸಬೇಕು. ಆಗಲೇ ಶಿಕ್ಷಣ ಕ್ಷೇತ್ರಕ್ಕೆ ಬೀಳುವ ಹಣಕ್ಕೆ ತಕ್ಕ ಫಲ ಸಿಗುತ್ತದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವನಾಥ್ ಹೇಳಿದರು.
(ಯುಎನ್ಐ)