ಆಂಧ್ರದಲ್ಲಿ ನೀವೀಗ ಹುಲಿ ಸಿಂಹಗಳನ್ನೂ ಸಾಕಬಹುದು
ಹೈದರಾಬಾದ್ : ಆಂಧ್ರ ಪ್ರದೇಶ ಸರಕಾರ ಹುಲಿ ಸಿಂಹಗಳಂತಹ ಪ್ರಾಣಿಗಳನ್ನೂ ಸಾಕಲು ನಾಗರಿಕರಿಗೆ ಅನುಮತಿ ನೀಡಲು ನಿರ್ಧರಿಸಿದೆ. ಆದರೆ ಒಂದು ಕಂಡಿಷನ್. ಅವುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡು ಸಂಭ್ರಮಿಸುವಂತಿಲ್ಲ.
ಆಂಧ್ರಪ್ರದೇಶದ ಮೂರು ಝೂವಲಾಜಿಕಲ್ ಪಾರ್ಕ್ಗಳಲ್ಲಿ ಯಾವುದಾರೂ ಒಂದು ಪಾರ್ಕ್ನ ಪಂಜರದೊಳಗೆ ನಿಮ್ಮ ಪ್ರೀತಿಯ ಹುಲಿಯೋ ಸಿಂಹವನ್ನೋ ಸಾಕಬಹುದು. ಅವುಗಳನ್ನು ಮುದ್ದಿಸಬೇಕೆಂದರೆ ಆ ಪಾರ್ಕಿಗೇ ಹೋಗಬೇಕು.
ಅಲ್ಲಿನ ಅರಣ್ಯ ಖಾತೆ ಸಚಿವ ಸಿ. ಎಚ್. ಅಯ್ಯಣ್ಣ ಪಟ್ರುಡು ಈ ವಿಷಯವನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಗುರುವಾರ ತಿಳಿಸಿದ್ದಾರೆ. ದಾನಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ಮತ್ತು ಪ್ರಾಣಿ ದಯಾಪರರಿಗೆ ಇದೊಂದು ಒಳ್ಳೆಯ ಅವಕಾಶ. ಸಾಕಲು ಹುಲಿ ಸಿಂಹಗಳೇ ಆಗಬೇಕೆಂದಿಲ್ಲ. ತಮಗಿಷ್ಟವಾದ ಹಕ್ಕಿಗಳನ್ನೋ, ಪ್ರಾಣಿಗಳನ್ನು ಈ ಝೂನಲ್ಲಿಟ್ಟು ಅವುಗಳ ಯೋಗ ಕ್ಷೇಮ ನೋಡಿಕೊಳ್ಳಬಹುದು. ಒಮ್ಮೆ ತಮ್ಮ ಪ್ರೀತಿಯ ಪ್ರಾಣಿಯನ್ನು ಈ ಝೂನಲ್ಲಿಟ್ಟು ಬೆಳೆಸಲು ಆರಂಭಿಸಿದ ನಂತರ ಅವುಗಳ ಎಲ್ಲ ಖರ್ಚು ವೆಚ್ಚವನ್ನು ಮಾಲಿಕರೇ ಭರಿಸಬೇಕು.
ಇದರಿಂದಾಗಿ ಅಳಿಯುತ್ತಿರುವ ಕಾಡು ಪ್ರಾಣಿಗಳನ್ನು ಸಂರಕ್ಷಿಸುವ ಕೆಲಸ ಮತ್ತು ಅಪರೂಪವಾಗುತ್ತಿರುವ ಪ್ರಾಣಿಗಳ ಬಗ್ಗೆ ಜನರಲ್ಲಿ ಜಾಗೃತಿ ಎರಡೂ ಆದಂತಾಗುತ್ತದೆ ಎಂದು ಅಯ್ಯಣ್ಣ ಹೇಳುತ್ತಾರೆ. ಒಂದು ಸಿಂಹ ಅಥವಾ ಹುಲಿಯನ್ನು ನೀವು ಸಾಕಬೇಕೆಂದುಕೊಂಡಿದ್ದರೆ ವರ್ಷಕ್ಕೆ ಅಂದಾಜು ಒಂದು ಲಕ್ಷ ರೂಪಾಯಿ ಖರ್ಚಾಗುತ್ತದೆ. ಈ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಆಂಧ್ರ ಪ್ರದೇಶ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಿದೆ ಎಂದು ಸಚಿವ ಅಯ್ಯಣ್ಣ ಹೇಳಿದರು.
(ಯುಎನ್ಐ)