ಮುಚ್ಚೂರು ಕೆರೆ ದುರಸ್ತಿ ಅವ್ಯವಹಾರ ತನಿಖೆಗೆ ನಿರ್ಣಯ
ಮಂಗಳೂರು : ಸಣ್ಣ ನೀರಾವರಿ ಇಲಾಖೆಯ ಮತ್ತೊಂದು ಕಾಮಗಾರಿ ಹಗರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಮಂಗಳೂರು ತಾಲೂಕು ಪಂಚಾಯಿತಿ ನಿರ್ಣಯಿಸಿದೆ. ಮುಚ್ಚೂರು ಕೆರೆ ದುರಸ್ತಿಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸಣ್ಣ ನೀರಾವರಿ ಇಲಾಖೆಗೆ ಸೂಚಿಸಿ, ಆರು ತಿಂಗಳಾದರೂ ವರದಿ ಕೈಸೇರಿಲ್ಲ.
ಈ ಹಿನ್ನೆಲೆಯಲ್ಲಿ ಸ್ವತಂತ್ರ ತನಿಖೆ ನಡೆಸಲು ತಾಲೂಕು ಪಂಚಾಯತ್ ಸಾಮಾನ್ಯ ಸಭೆ ನಿರ್ಧರಿಸಿತು. ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅವ್ಯವಹಾರಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಜನವರಿ 22ರಂದು ವರದಿ ನೀಡುವುದಾಗಿ ತಿಳಿಸಿದ್ದ ಇಲಾಖೆ ಇನ್ನೂ ಏಕೆ ವರದಿ ನೀಡಲಿಲ್ಲ ಎಂದು ಸದಸ್ಯರು ಪ್ರಶ್ನಿಸಿದರು. ಕರ್ತವ್ಯಲೋಪ ಎಸಗಿದ ಸಣ್ಣ ನೀರಾವರಿ ಅಧಿಕಾರಿಗಳ ವಿರುದ್ಧ ಸರಕಾರಕ್ಕೆ ವರದಿ ಸಲ್ಲಿಸಲು ಸಭೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಮುಂಗಡಪತ್ರ : ಉಡುಪಿ ಜಿಲ್ಲಾ ಪಂಚಾಯತ್ 2001-2002ನೇ ಸಾಲಿಗೆ 42.97 ಕೋಟಿ ರುಪಾಯಿಗಳ ಮುಂಗಡಪತ್ರ ಮಂಡಿಸಿದ್ದು, ಮಾಸಿಕ ಸಾಮಾನ್ಯ ಸಭೆ ಇದಕ್ಕೆ ಅನುಮೋದನೆ ನೀಡಿತು. 42.97 ಕೋಟಿ ರುಪಾಯಿ ಅಂದಾಜು ಮೌಲ್ಯದ ಬಜೆಟ್ನಲ್ಲಿ ರಾಜ್ಯದ ಪಾಲು 23.64 ಕೋಟಿ ಹಾಗೂ ಕೇಂದ್ರದ ಪಾಲು 19.33 ಕೋಟಿ ರುಪಾಯಿ ಆಗಿದೆ.
ಒಟ್ಟು ಮೊತ್ತದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ 21.28 ಕೋಟಿ ರುಪಾಯಿ ಮೀಸಲಿಡಲಾಗಿದೆ. ಪಂಚಾಯತ್ ಅಧ್ಯಕ್ಷೆ ಸರಸು ಡಿ. ಬಂಗೇರಾ ಅವರು ಈ ಮುಂಗಡಪತ್ರವನ್ನು ಸಭೆಯಲ್ಲಿ ಮಂಡಿಸಿದರು. ಕುಡಿಯುವ ನೀರಿಗೆ 5.83 ಕೋಟಿ ರುಪಾಯಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ 81 ಲಕ್ಷ ರುಪಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 78.25 ಲಕ್ಷ ರುಪಾಯಿ ಮತ್ತು 3.28 ಕೋಟಿ ರುಪಾಯಿಗಳನ್ನು ವಿನಿಯೋಗಿಸಲು ನಿರ್ಧರಿಸಲಾಗಿದೆ.
ಜಿಲ್ಲಾ ಪಂಚಾಯತಿಯ ಸ್ವಂತ ಕಟ್ಟಡಕ್ಕೆ 20 ಲಕ್ಷ ರುಪಾಯಿ ತೆಗೆದಿರಿಸಲಾಗಿದ್ದರೆ, ಇತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 3.38 ಕೋಟಿ ರುಪಾಯಿ ಮೀಸಲಿಡಲಾಗಿದೆ.
(ಮಂಗಳೂರು ಪ್ರತಿನಿಧಿಯಿಂದ)