ವಾಜಪೇಯಿ ಭೇಟಿ ಮಾಡಲು ಶುಕ್ರವಾರ ದೆಹಲಿಗೆ ಎಸ್.ಎಂ. ಕೃಷ್ಣ
ಬೆಂಗಳೂರು : ವಿದ್ಯುತ್ ಕ್ಷೇತ್ರಗಳಲ್ಲಿನ ಸುಧಾರಣೆ ಸೇರಿದಂತೆ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಧಾನಿ ವಾಜಪೇಯಿ ಅವರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ , ಶುಕ್ರವಾರ ದೆಹಲಿಗೆ ತೆರಳುವರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಡಬ್ಲ್ಯೂಟಿಓ ಒಪ್ಪಂದದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಬಗ್ಗೆ ಮುಖ್ಯಮಂತ್ರಿಗಳು ಪ್ರಧಾನಿಯವರಲ್ಲಿ ತಮ್ಮ ಅಸಮಾಧಾನ ಸೂಚಿಸುವ ನಿರೀಕ್ಷೆಯಿದೆ. ಗುರುವಾರ ವಿಧಾನ ಪರಿಷತ್ತಿನಲ್ಲಿ ಮಾತನಾಡುತ್ತಿದ್ದ ಅವರು, ವಿವಿಧ ಕ್ಷೇತ್ರಗಳ ಮೇಲೆ ವಿಶೇಷವಾಗಿ ಕೃಷಿ ಕ್ಷೇತ್ರದ ಮೇಲೆ ಡಬ್ಲ್ಯೂಟಿಓ ಒಪ್ಪಂದ ಬೀರುವ ಪರಿಣಾಮಗಳ ಬಗ್ಗೆ ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹಾ ತಮ್ಮ ಮುಂಗಡ ಪತ್ರದಲ್ಲಿ ಅನಗತ್ಯ ರಹಸ್ಯ ಪಾಲಿಸಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು.
ಡಬ್ಲ್ಯೂಟಿಓ ಒಪ್ಪಂದದಿಂದ ಉಂಟಾಗಬುದಾದ ಪರಿಣಾಮಗಳನ್ನು ಒಟ್ಟಾಗಿ ಎದುರಿಸಲು ಅನುವಾಗುವಂತೆ ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀತಿಯಾಂದನ್ನು ರಚಿಸುವಂತೆ ಈ ಮುನ್ನವೇ ಪ್ರಧಾನಿವರನ್ನು ಕೋರಿದ್ದೆ ಎಂದು ಕೃಷ್ಣ ಹೇಳಿದರು. ಜನತಾದಳದ ಸದಸ್ಯ ಎಂ.ಸಿ. ನಾಣಯ್ಯನವರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
(ಪಿಟಿಐ)