ನರಗುಂದ : ಮುಸುಕಿನ ಜೋಳದ ರೈತನ ಪಾಡೂ ಮಸುಕು
ನರಗುಂದ : ಆಲೂಗಡ್ಡೆ ತೊಟ್ಟಿ ಸೇರಿದ್ದಾಯಿತು. ಈರುಳ್ಳಿ ಕೊಳೆತು ಚರಂಡಿ ತುಂಬಿದ್ದಾಯಿತು. ಈಗ ಮುಸುಕಿನ ಜೋಳದ ಸರದಿ.
ರೈತರ ಬೆಳೆಗೆ ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಪರೀಕ್ಷೆ ಮೇಲೆ ಪರೀಕ್ಷೆ ಎದುರಿಸಬೇಕಾಗಿದೆ. ಮತ್ತೊಂದು ಪರೀಕ್ಷೆಯಲ್ಲಿ ಅದು ಪಲ್ಟಿ ಹೊಡೆದಿದೆ. ಮುಸುಕಿನ ಜೋಳದ ಬೆಳೆಗಾರರು ಕ್ರುದ್ಧರಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಶನಿವಾರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ನಾವು ಪ್ರತಿ ನಿತ್ಯ 2ರಿಂದ 3 ಸಾವಿರ ಕ್ವಿಂಟಾಲ್ ಮಾಲನ್ನು ಕೊಳ್ಳುತ್ತಿದ್ದೇವೆ. ಆದರೆ ಎರಡು ಮೂರು ದಿನಗಳಿಂದ ಐದಾರು ಸಾವಿರ ಕ್ವಿಂಟಾಲ್ ಬೆಳೆ ಮಾರುಕಟ್ಟೆಗೆ ಬರುತ್ತಿದೆ. ಇಷ್ಟೊಂದು ದಿಢೀರ್ ಹೆಚ್ಚಳದ ಮಾಲನ್ನು ಕೊಂಡುಕೊಳ್ಳವುದು ಸಹಜವಾಗಿಯೇ ವಿಳಂಬವಾಗುತ್ತಿದೆ ಎಂಬುದು ಎಪಿಎಂಸಿ ಅಧಿಕಾರಿಗಳ ಸಮಜಾಯಿಷಿ.
ಇವೆಲ್ಲಾ ಅವರವರು ಜೇಬು ತುಂಬಿಕೊಳ್ಳಲು ಕೊಡುತ್ತಿರುವ ಸಬೂಬು, ಅಷ್ಟೆ . ದಲ್ಲಾಳಿಗಳು ಒಲಿಯುವ ಬೆಳೆಗಾರರಿಗೆ ಮಾತ್ರ ಹೇಗೆ ನ್ಯಾಯ ಸಿಗುತ್ತಿದೆ? ಎಲ್ಲಾ ರೈತರಿಗೂ ಆ ಭಾಗ್ಯ ಯಾಕೆ ಇಲ್ಲ ? ಇಲ್ಲಿ ನಮ್ಮ ಬೆಳೆ ಮಾರಿ, ಕೈತೊಳೆದುಕೊಂಡು ಹೋಗೋ ಹಾಗೂ ಇಲ್ಲ. ಸರ್ಕಾರ ಕೊಂಡ ಮಾಲನ್ನು ಜಾಗದಿಂದ ಎತ್ತೋವರೆಗೆ ನಾವು ಮನೆ ಕಡೆ ಹೋಗೋ ಹಾಗೇ ಇಲ್ಲ. ಇಲ್ಲಿ ಮಾರಲು, ಅದನ್ನು ಜಾಗೆಯಿಂದ ಖಾಲಿ ಮಾಡಿಸಲು ಎರಡಕ್ಕೂ ಚಾತಕ ಪಕ್ಷಿಗಳಂತೆ ಕಾಯಬೇಕಾದ ಪರಿಸ್ಥಿತಿ ಬಂದಿದೆ ಎಂದು ರೈತರು ಖಿನ್ನತೆಯಿಂದ ಪ್ರತಿಕ್ರಿಯಿಸುತ್ತಾರೆ.
ಕೆಲವು ರೈತರು ಹೇಳುವಂತೆ ಕಳೆದೆರಡು ದಿನಗಳಿಂದ ಖರೀದಿಯನ್ನು ನಿಲ್ಲಿಸಲಾಗಿದೆ. ಆದರೂ ಹಿಂಬಾಗಿಲ ವ್ಯವಹಾರ ಮಾತ್ರ ನಡೆದೇ ಇದೆ. ದಿನಕ್ಕೆ ಇಂತಿಷ್ಟು ಮುಸುಕಿನ ಜೋಳ ಕೊಂಡುಕೊಳ್ಳಬೇಕು ಎಂಬುದನ್ನು ಭಾರತೀಯ ಆಹಾರ ನಿಗಮ ಗೊತ್ತುಪಡಿಸುತ್ತದೆ. ಅದು ಆದೇಶಿಸಿರುವಂತೆ ನಾವು ದಿನಕ್ಕೆ ಎರಡೂವರೆ ಸಾವಿರ ಕ್ವಿಂಟಾಲ್ಗಿಂತ ಹೆಚ್ಚು ಮಾಲನ್ನು ಖರೀದಿ ಮಾಡುವಂತಿಲ್ಲ . ರೈತರೂ ಇದನ್ನು ಮನಗಂಡು ಸಹಕರಿಸಬೇಕು ಎನ್ನುತ್ತಾರೆ ಅಧಿಕಾರಿಗಳು.
ಏನೇ ಆಗಲಿ, ಕರ್ನಾಟಕದ ರೈತನಿಗೆ ಇದು ಸಕಾಲವಲ್ಲ. ಹ್ಞಾಂ, ದಲ್ಲಾಳಿಗಳಿಗೆ, ಗುರುಮಘಾತುಕ ಅಧಿಕಾರಿಗಳಿಗಂತೂ ಹೌದು. ಮೊನ್ನೆಯಷ್ಟೇ ಮೂವರು ಅಧಿಕಾರಿಗಳು ಅಮಾನತುಗೊಂಡಿರುವುದಾದರೂ ಇವರಿಗೆ ಎಚ್ಚರಿಕೆಯಾಗಲಿ.
(ಯುಎನ್ಐ)