ಹೊಸಗಾಳಿ ಬೆಳಕಿನ ಮಾಹಿತಿ ತಂತ್ರಜ್ಞಾನ
ಬೆಂಗಳೂರು : ಈಗಾಗಲೇ ಕಂಪ್ಯೂಟರ್ ಸಂಬಂಧಿ ಸಾಕಷ್ಟು ಯಶಸ್ವಿ ಅನ್ವೇಷಣೆಗಳು ನಡೆದಿವೆ. ಅದನ್ನು ಸರಿಯಾದ ಜಾಲದಲ್ಲಿ ವ್ಯವಸ್ಥೆಗೊಳಿಸುವುದಷ್ಟೆ ನಮ್ಮ ಮುಂದಿರುವ ಸವಾಲು ಎಂದು ಪ್ರಸಿದ್ಧ ವಿಜ್ಞಾನಿ ಡಾ. ರಾಜಾ ರಾಮಣ್ಣ ಹೇಳಿದ್ದಾರೆ.
ಭಾನುವಾರ ಅವರು, ವೈಟ್ಫೀಲ್ಡ್ನಲ್ಲಿರುವ ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಯ ಮೊದಲನೇ ಘಟಿಕೋತ್ಸವ ಭಾಷಣ ಮಾಡುತ್ತಿದ್ದರು. ಅಂತರ್ಜಾಲದ ತಂತ್ರಜ್ಞಾನ ಆರ್ಥಿಕ ವ್ಯವಸ್ಥೆಗೆ ಹೊಸ ರೂಪು ನೀಡಿದೆ. ಆರ್ಥಿಕ ನೀತಿಯ ವ್ಯಾಖ್ಯೆಗಳನ್ನು ಬದಲಿಸಿದೆ. ಪರಿಕಲ್ಪನೆ, ಜೀವಂತಿಕೆ, ಅಳವಡಿಕೆ, ಒಳಗೊಳ್ಳುವಿಕೆ ಹಾಗೂ ಮುನ್ನುಗ್ಗುವಿಕೆಗಳು ಪ್ರಗತಿ ಪರ ಆರ್ಥಿಕ ನೀತಿಯ ತಾರಕ ಮಂತ್ರಗಳೆಂದು ರಾಜಾ ರಾಮಣ್ಣ ಬಣ್ಣಿಸಿದರು.
ಘಟಿಕೋತ್ಸವದಲ್ಲಿ 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಡಿಪ್ಲೊಮ ವಿತರಿಸಲಾಯಿತು. ಭಾರತೀಯ ಕಂಪನಿಗಳು ಮಾತ್ರವಲ್ಲದೆ ಜರ್ಮನಿ, ಜಪಾನ್, ಅಮೆರಿಕ, ಚೀನಾ ದೇಶಗಳ ಐಟಿ ಕಂಪನಿಗಳು ಈ ವಿದ್ಯಾರ್ಥಿಗಳಿಗೆ ಈಗಾಗಲೇ ಉದ್ಯೋಗಾವಕಾಶ ಕಲ್ಪಿಸಿವೆ.
ಹಳ್ಳಿಗಳತ್ತ ಹೊರಳಿ : ರಾಜಧಾನಿ ಕೇಂದ್ರದಲ್ಲೇ ಮರಳಿ ಹೊರಳಿ ತಮ್ಮ ಗಮನ ಹರಿಸುವುದರ ಬದಲು, ರಾಜ್ಯದ ಇತರ ಭಾಗಗಳಲ್ಲೂ ತಮ್ಮ ಕಾರ್ಯ ಜಾಲ ಹಮ್ಮಿಕೊಳ್ಳಲು ಮುಂದಾಗಬೇಕೆಂದು ಘಟಿಕೋತ್ಸವದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಐಟಿ ಕಂಪನಿಗಳನ್ನು ಒತ್ತಾಯಿಸಿದರು.
ನಗರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವ ಮಾಹಿತಿ ಮತ್ತು ತಂತ್ರಜ್ಞಾನ , ಗ್ರಾಮೀಣ ಪ್ರದೇಶಗಳಿಗೂ ವಿಸ್ತಾರಗೊಳ್ಳಬೇಕು. ಪ್ರಗತಿ ಹಾಗೂ ಯುವ ಜನತೆಗೆ ಅವಕಾಶಗಳು ಎಲ್ಲೆಡೆಯೂ ಏಕರೂಪವಾಗಿರುವ ಅಗತ್ಯದ ಕುರಿತು ಕೃಷ್ಣ ಒತ್ತಿ ಹೇಳಿದರು.
ಧಾರವಾಡದಲ್ಲಿ ಕೂಡ ಬೆಂಗಳೂರಿನಲ್ಲಿ ಇರುವಂಥದ್ದೇ ಐಟಿ ಸಂಸ್ಥೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ 30 ಸಾವಿರ ಚದರ ಅಡಿ ಭೂಮಿಯನ್ನು ಒದಗಿಸುವುದು. ಸಂಸ್ಥೆಯ ಸ್ಥಾಪನೆಗೆ ಅಗತ್ಯವಾದ ದೊಡ್ಡ ಪ್ರಮಾಣದ ನಿಧಿಯನ್ನೂ ಸರ್ಕಾರ ನೀಡುವುದು. ಸಂಸ್ಥೆಯ ಅಗತ್ಯಗಳನ್ನು ಪೂರೈಸಲು ಭಾರತೀಯ ಸಾಫ್ಟ್ವೇರ್ ಪಾರ್ಕ್ ಕೂಡ ಮುಂದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಗೆ ಸರ್ಕಾರ ನೀಡುವುದಾಗಿ ಘೋಷಿಸಿದ್ದ 10 ಕೋಟಿ ರುಪಾಯಿಗಳ ಪೈಕಿ 5 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿರುವುದಾಗಿ ಕೃಷ್ಣ ಘೋಷಿಸಿದರು.
ದೇಶದ ಮೇಲೆ ಪ್ರಕೃತಿಯ ಮುನಿಸು : ದೇಶದಲ್ಲಿ ಹಿಂದೆಂದೂ ಕಾಣದಷ್ಟು ಭೀಕರ ನೈಸರ್ಗಿಕ ವಿಕೋಪಗಳು ಕಳೆದ 10 ವರ್ಷಗಳಲ್ಲಿ ಸಂಭವಿಸಿವೆ ಎಂದು ಕೃಷ್ಣ ವಿಷಾದಿಸಿದರು. ಗುಜರಾತ್ನಂತಹ ಪ್ರಾಕೃತಿಕ ದುರಂತಗಳು ಸಂಭವಿಸಿದಾಗ, ಅದನ್ನು ನಿಭಾಯಿಸಲು ಶಾಶ್ವತ ಕಾರ್ಯ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ರೂಪಿಸಬೇಕು. ಇದರಿಂದಾಗಿ ದುರಂತದ ಹಾನಿ ಕಡಿಮೆಯಾಗುತ್ತದೆ ಎಂದು ಕೃಷ್ಣ ಹೇಳಿದರು. ನೈಸರ್ಗಿಕ ದುರಂತದ ವಿಷಯಗಳಿಗೆ ಸಂಬಂಧಿಸಿದಂತೆ ವಿಜ್ಞಾನಿಗಳು ಮತ್ತಷ್ಟು ಶೋಧಗಳನ್ನು ಕೈಗೊಳ್ಳಬೇಕು. ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಅವರ ಪ್ರಯತ್ನಗಳು ದುಪ್ಪಟ್ಟಾಗಬೇಕು ಎಂದರು.
(ಯುಎನ್ಐ)