ಖರ್ಗೆ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪಗಳ ನಿರ್ವಹಣಾ ಸಮಿತಿ
ಬೆಂಗಳೂರು : ಭೂಕಂಪದಂತಹ ಪ್ರಾಕೃತಿಕ ವಿಕೋಪಗಳನ್ನು ನಿಭಾಯಿಸಲು ಗೃಹಸಚಿವ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ನಿರ್ವಹಣಾ ಸಮಿತಿಯಾಂದನ್ನು ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ನಿರ್ವಹಣಾ ಸಮಿತಿ ಭೂಕಂಪ ತಜ್ಞರನ್ನು ಹೊಂದಿದ್ದು , ವಿಷಮ ಪರಿಸ್ಥಿತಿಗಳ ನಿಭಾವಣೆಗೆ ತಜ್ಞರು ಸರ್ಕಾರಕ್ಕೆ ಸಲಹೆ ನೀಡುವರು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ. ಶನಿವಾರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಬೆಂಗಳೂರಿನಲ್ಲಿ ಭೂಕಂಪದ ತೀವ್ರತೆಯನ್ನು ದಾಖಲಿಸುವ ರಿಕ್ಟರ್ ಮಾಪಕ ಅಳವಡಿಸುವ ಅಗತ್ಯತೆ ಕುರಿತಂತೆಯೂ ತಜ್ಞರು ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲಹೆ ನೀಡುವರು. ಜನವರಿ 29 ರಂದು ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಉಂಟಾದ ಲಘು ಭೂಕಂಪಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭೂಕಂಪ ಮಾಪನ ಕೇಂದ್ರವನ್ನು ಸ್ಥಾಪಿಸುವಂತೆ ವಿವಿಧ ವಲಯಗಳ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದರು. ಪ್ರಸ್ತುತ ರಾಜ್ಯದಲ್ಲಿರುವ ಏಕೈಕ ಭೂಕಂಪ ಮಾಪನ ಕೇಂದ್ರ ಕೋಲಾರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಹೊಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ |