ರಾಮ ಜನ್ಮಭೂಮಿ ಬಗ್ಗೆ ಪೇಜಾವರ ಶ್ರೀ -ವಾಜಪೇಯಿ ಮಾತುಕತೆ
ಉಡುಪಿ : ರಾಮಜನ್ಮ ಭೂಮಿ ಪ್ರಕರಣ ಸೇರಿದಂತೆ ಹಲವಾರು ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರೊಂದಿಗೆ ಪ್ರಧಾನಿ ವಾಜಪೇಯಿ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ.
ಗುರುವಾರ ರಾತ್ರಿ ಭೋಜನಾ ನಂತರ ಪ್ರಧಾನಿಯವರು ತಮ್ಮೊಂದಿಗೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಶುಕ್ರವಾರ ಯುಎನ್ಐ ಪ್ರತಿನಿಧಿಗೆ ಸ್ವಾಮೀಜಿ ತಿಳಿಸಿದರು. ಆದರೆ, ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಲು ಸ್ವಾಮೀಜಿ ನಿರಾಕರಿಸಿದರು.
ಮಂಗಳೂರು ಮತ್ತು ಹಾಸನ ನಡುವಣ ರೈಲ್ವೆ ಮಾರ್ಗದ ಗೇಜ್ ಬದಲಾವಣೆಯ ಕಾರ್ಯವನ್ನು ತ್ವರಿತಗೊಳಿಸಲು ಹಾಗೂ ಪರಿಸರ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಮಂಗಳೂರು ರೀಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ನ ಪೈಪ್ಲೈನ್ ಅಳವಡಿಕೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿಗಳನ್ನು ಒತ್ತಾಯಿಸಲಾಯಿತು. ವಾಜಪೇಯಿ ತಮ್ಮ ಮಾತುಗಳನ್ನು ತಾಳ್ಮೆಯಿಂದ ಆಲಿಸಿದರು ಎಂದು ಸ್ವಾಮೀಜಿ ಹೇಳಿದರು.
ಬೆಂಗಳೂರಿಗೆ ಪ್ರಧಾನಿ : ರಾಜಾಂಗಣದ ಉದ್ಘಾಟನೆಗಾಗಿ ಗುರುವಾರ ಸಂಜೆ ಉಡುಪಿಗೆ ಆಗಮಿಸಿದ್ದ ಪ್ರಧಾನಿ ವಾಜಪೇಯಿ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ವಿಮಾನ ಏರಿದರು. ರಾಜ್ಯ ಬಿಜೆಪಿ ನಾಯಕರಾದ ವಿ.ಎಸ್.ಆಚಾರ್ಯ, ಶಾಸಕರಾದ ಯು.ಆರ್. ಸಭಾಪತಿ, ವಸಂತ ಸಾಲಿಯಾನ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಗೋಪಾಲ ಪೂಜಾರಿ ಮುಂತಾದವರು ಪ್ರಧಾನಿಗಳನ್ನು ಬೀಳ್ಕೊಡಲು ಹೆಲಿಪ್ಯಾಡ್ನಲ್ಲಿ ಹಾಜರಿದ್ದರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ಕರ್ನಾಟಕದಲ್ಲಿ
ವಾಜಪೇಯಿ
/
ವಾಜಪೇಯಿ
ಚಿತ್ರಪಟ