ಡಿ.31ರಂದು ಅಪಹರಣವಾಗಿದ್ದ ಬಾಲಕನ ಕೊಲೆ, ಶವ ಪತ್ತೆ
ಬೆಂಗಳೂರು : ಡಿಸೆಂಬರ್ 31ರಂದು ಅಪಹರಣಕ್ಕೊಳಗಾಗಿದ್ದ ನಗರದ ಲವರೀಸ್ ಶಾಲೆಯ 14 ವರ್ಷದ ಬಾಲಕ ಪ್ರೇಮ್ಕುಮಾರ್ನ ಶವ ರಾಮಮೂರ್ತಿನಗರದ ಸಣ್ಣಕೆರೆಯಲ್ಲಿ ಪತ್ತೆಯಾಗಿದ್ದು, ಅಪಹರಣ ಪ್ರಕರಣ ಕೊಲೆಯಲ್ಲಿ ಅಂತ್ಯಗೊಂಡಿದೆ.
ಕೊಲೆಯಾಗಿರುವ ಪ್ರೇಮ್ಕುಮಾರ್ ತಂದೆ ಗೋವಿಂದ್ ಸೌದಿ ಅರೇಬಿಯಾದಲ್ಲಿ ಕೆಲಸದಲ್ಲಿದ್ದಾರೆ. ಪ್ರೇಮ್ ಡಿ.31ರ ಭಾನುವಾರ ಬೆಳಗ್ಗೆ ಸೈಕಲ್ ಏರಿ ಮನೆಯಿಂದ ಹೊರಟವನು ಮತ್ತೆ ಹಿಂತಿರುಗಲಿಲ್ಲ. ಮಧ್ಯಾಹ್ನ ಫೋನ್ ಮಾಡಿದ ಅನಾಮಧೇಯ ವ್ಯಕ್ತಿಯಾಬ್ಬ, ತಾನು ಮಗುವನ್ನು ಅಪಹರಿಸಿರುವುದಾಗಿ ತಿಳಿಸಿ, ಮಗುವಿನ ಬಿಡುಗಡೆಗೆ 20 ಲಕ್ಷ ರುಪಾಯಿ ಬೇಡಿಕೆ ಇಟ್ಟಿದ್ದ. ಹಣ ಕೊಡಲು ನಿರಾಕರಿಸಿದರೆ, ಮಗುವನ್ನು ಕೊಲ್ಲುವುದಾಗಿಯೂ ಬೆದರಿಕೆಯನ್ನೂ ಹಾಕಿದ್ದ.
ಇದಾದ ಎರಡು ದಿನಗಳ ನಂತರವೂ ಹಣಕ್ಕಾಗಿ ಅಪಹರಣಕಾರರು ಫೋನ್ ಮಾಡಿದ್ದರಾದರೂ, ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾಗಿ, ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡ ನಂತರ ಅಪಹರಣಕಾರರು ಫೋನ್ ಮಾಡುವುದನ್ನೇ ಬಿಟ್ಟಿದ್ದರು. ಈ ಹಂತದಲ್ಲಿ ಬಾಲಕನ ಕೊಲೆ ಆಗಿರಬಹುದು ಎಂದು ಶಂಕಿಸಲಾಗಿತ್ತು. ಬಾಲಕನ ಶವ ಮಾತ್ರ ಈಗ ಪತ್ತೆಯಾಗಿದ್ದು, ಆತನ ಸೈಕಲ್ ಏನಾಗಿದೆ ಎಂದು ಗೊತ್ತಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.