ಕನ್ನಮಂಗಲ, ಎಲಿಯೂರಿನಲ್ಲಿ ಚಿಣ್ಣರ ಮೇಳ
ಬೆಂಗಳೂರು : ದೊಡ್ಡ ಬಳ್ಳಾಪುರ ಬಳಿಯ ಕನ್ನಮಂಗಲ ಹಾಗೂ ಚನ್ನಪಟ್ಟಣ ತಾಲೂಕಿನ ಎಲಿಯೂರು ಹಾಗೂ ಅಂಬಾಡಿ ಹಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಚಿಣ್ಣರ ಮೇಳವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯ ಪ್ರಕಾಶಕ್ಕೆ ಚಿಣ್ಣರ ಮೇಳ ಸಹಕಾರಿಯಾಗಿದೆ ಎಂದು ಗ್ರಾಮ ಶಿಕ್ಷಣ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ ಹೇಳಿದರು. ಎಲಿಯೂರಿನ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಎಲಿಯೂರು ಶಾಲಾ ಮಕ್ಕಳ ಜತೆ, ಗುಡ್ಡಾಪುರ, ಕಲ್ಲಾಪುರ, ಸಿದ್ದಾಪುರ ಶಾಲೆಗಳ ಮಕ್ಕಳೂ ಪಾಲ್ಗೊಂಡು ವಿಚಾರ ವಿನಿಮಯ ಮಾಡಿಕೊಂಡರು.
ಅಂಬಾಡಿಹಳ್ಳಿಯಲ್ಲಿ ನಡೆದ ಕಾರ್ಯಕ್ರಮವನ್ನು ಜಿ.ಪಂ. ಸದಸ್ಯ ಬೈರೇಗೌಡ ಉದ್ಘಾಟಿಸಿದರು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಅವರು ಕರೆ ನೀಡಿದರು. ಮಕ್ಕಳ ಕಲಿಕೆಗೆ ಪೂರಕವಾದ ಇಂತಹ ಕಾರ್ಯಕ್ರಮಗಳು ರಾಜ್ಯದೆಲ್ಲೆಡೆ ನಡೆಯಬೇಕು ಎಂದೂ ಅವರು ಅಭಿಪ್ರಾಯಪಟ್ಟರು.
ಗ್ರಾಮ ಶಿಕ್ಷಣ ಸಮಿತಿ ಅಧ್ಯಕ್ಷ ಸಿ. ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಕನ್ನಮಂಗಲ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಮ್ಲಾ ನಾಯಕ್, ಮುಖ್ಯ ಶಿಕ್ಷಕ ಬಿ. ರಾಮಯ್ಯ ಭಾಗವಹಿಸಿದ್ದರು. ತರಗತಿಯಲ್ಲಿ ಸಂತಸದಾಯಕ ಕಲಿಕೆಗೆ ಚಿಣ್ಣರ ಲೋಕ ಮಾದರಿಯಾಗಿದೆ. ಚಟುವಟಿಕೆ ಆಧರಿತ ಈ ಕಾರ್ಯಕ್ರಮ ಮಕ್ಕಳ ಕಲಿಕೆಗೆ ಉತ್ತೇಜನ ನೀಡುತ್ತದೆ ಎಂದು ಹೇಮ್ಲಾ ನಾಯಕ್ ಹೇಳಿದರು.