ಹೈಟೆಕ್ ಸಿಎಂನಿಂದ ಮಣ್ಣಿನ ಮಗನ ತರಾಟೆ
ಪಿರಿಯಾಪಟ್ಟಣ: ಹೈಟೆಕ್ ಮುಖ್ಯಮಂತ್ರಿ ಎನಿಸಿಕೊಳ್ಳಲೂ ಯೋಗ್ಯತೆ ಬೇಕು, ಅರ್ಹತೆ ಬೇಕು ಇದು ಮಣ್ಣಿನ ಮಗ ಎಂದು ಸ್ವಯಂ ಘೋಷಿಸಿಕೊಂಡಂತಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ಹೆಸರು ಹೇಳದೆಯೇ ಮಾಜಿ ಪ್ರಧಾನಿ ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡರು.
ಹೈಟೆಕ್ ಖ್ಯಾತಿಯಿಂದಲೇ ರಾಜ್ಯ ಪ್ರಗತಿ ಸಾಧಿಸುತ್ತಿದೆ. ನಮ್ಮ ಸರಕಾರ ಮಾಹಿತಿ ತಂತ್ರಜ್ಞಾನಕ್ಕೆ ಮಹತ್ವ ನೀಡುತ್ತಿರುವುದರಿಂದ ನನ್ನನ್ನು ಕೆಲವರು ಹೈಟೆಕ್ ಸಿಎಂ ಎಂದರು. ಇನ್ನು ಕೆಲವರು ಕರುಬಿದರು ಎಂದ ಅವರು ಕೆಲವರು ತಮ್ಮನ್ನು ತಾವೇ ಮಣ್ಣಿನ ಮಕ್ಕಳೆಂದು ಕರೆದುಕೊಳ್ಳುತ್ತಾರೆ. ಅವರು ಹೈಟೆಕ್ ಆಗಲು ಸಾಧ್ಯವಿಲ್ಲ ಎಂದರು.
ಒಂದೇ ವರ್ಷದಲ್ಲಿ ರಾಜ್ಯವನ್ನು ಏಷ್ಯಾದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ತಮ್ಮ ಸರ್ಕಾರದ್ದು ಎಂದ ಕೃಷ್ಣ, ದೇಶ ವಿದೇಶಗಳ ಆಡಳಿತಗಾರರು ಸ್ವಯಂ ಪ್ರೇರಿತರಾಗಿ ಬೆಂಗಳೂರು ನೋಡಲು ಆಗಮಿಸುತ್ತಿದ್ದಾರೆ ಎಂದರು. ಸುತ್ತೂರು ಮಠದಲ್ಲಿ ನಡೆಯುತ್ತಿರುವ ಶ್ರೀ ಶಿವರಾತ್ರೀಶ್ವರ ಭಗವತ್ಪಾದರ ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಇಲ್ಲಿಗೆ ಆಗಮಿಸಿದ್ದರು.
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣಗಾರುಡಿ