ಚಂಡಮಾರುತ ನಮ್ಮೂರಿಗೂ ಬಂದೀತೆ ?
ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ಉಂಟಾಗಿರುವ ಚಂಡಮಾರುತ ಶ್ರೀಲಂಕಾದಲ್ಲಿ ಸುಮಾರು 50 ಸಾವಿರ ಜನರನ್ನು ನಿರ್ವಸಿತರನ್ನಾಗಿ ಮಾಡಿರುವ ದುರಂತದ ಬೆನ್ನಿಗೇ, ತಮಿಳುನಾಡಿಗೂ ಅಡಿಯಿಟ್ಟಿದೆ. ತಮಿಳು ನೆಲದಲ್ಲೂ ಭಾರೀ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿಗಳು ತಿಳಿಸಿವೆ.
ಪಕ್ಕದ ನೆಲದಲ್ಲಿನ ಆತಂಕಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಅನ್ನುವಂತಹ ವಾತಾವರಣ ರಾಜ್ಯದಲ್ಲಿದೆ. ಕೃಷಿಯನ್ನು ಹೈಟೆಕ್ ಮಟ್ಟಕ್ಕೆ ಏರಿಸುವ ಮೂಲಕ ವ್ಯವಸಾಯ ಮನೆ ಮಕ್ಕಳೆಲ್ಲಾ ಸಾಯ ಅನ್ನುವ ಮಾತನ್ನು ಸುಳ್ಳು ಮಾಡಲು ತಮ್ಮ ಸರ್ಕಾರ ಪಣ ತೊಟ್ಟಿರುವುದಾಗಿ ಹೈಟೆಕ್ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ. ರಾಜಕಾರಣಿಗಳ ಮಾತುಗಳಿಗೆ ಎಂದಿನಂತೆ ಸಂಭ್ರಮಿಸುವ ನಮ್ಮ ರೈತರು ಈ ಸುದ್ದಿಯಿಂದಲೂ ಖುಷಿಯಾಗಬಹುದು.
ತೀರಾ ಮನೆ ಅಂಗಳದ ಖಾಸಗಿ ವಿಚಾರವನ್ನೇ ಹೇಳುವುದಾದರೆ, ರಾಜ್ಯಾದ್ಯಂತ ಮಾಮೂಲಿನ ಒಣಹವೆ. ಒಳನಾಡು ಹಾಗೂ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದ್ದನ್ನು ಬಿಟ್ಟರೆ ಉಳಿದಂತೆ ರಾಜ್ಯದ ಹವಾಮಾನದಲ್ಲಿ ಹೇಳುವಂಥಾ ವ್ಯತ್ಯಯಗಳೇನೂ ಇಲ್ಲ . ಕನಿಷ್ಠ ತಾಪಮಾನ ಪಟ್ಟಿಯಲ್ಲಿ ತನ್ನ ಅಧಿಪತ್ಯ ಮುಂದುವರಿಸಿರುವ ಗುಲ್ಬರ್ಗಾ ಈ ದಿನ 9 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಿಸಿದೆ.
ಗುರುವಾರ ಕೂಡ ರಾಜ್ಯದ ಹವಾಮಾನ ಅದೇ ಹಾಡು ಅದೇ ರಾಗ ಎಂದು ಹವಾಮಾನ ಇಲಾಖೆಯ ಮೂಲಗಳನ್ನುದ್ದೇಶಿಸಿ ಯುಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಥಂಡಿಗಾಳಿ ಮಿಶ್ರಿತ ಚುರುಕುಗಾಳಿಯ ಹವೆ ಬೆಂಗಳೂರಿನಲ್ಲಿ ಮುಂದುವರಿಯುತ್ತದಂತೆ. ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿರುತ್ತದೆ. ಅಂದ ಮೇಲೆ, ತಮಿಳುನಾಡಿನಲ್ಲಿ ಕಾಣಿಸಿಕೊಂಡಿರುವ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೆ ಇಲ್ಲ ಎಂದಾಯಿತು. ಆದರೆ, ಬುಧವಾರ ಮಾತ್ರ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು .