ರಾಮಕ್ಕ ಮುಗೇರ್ತಿ ಮತ್ತು ಪೊಡಿಮ್ಮ ಅವರಿಗೆ ಅಬ್ಬಕ್ಕ ಪ್ರಶಸ್ತಿ
ಮಂಗಳೂರು : ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಜಾನಪದ ಕವಯತ್ರಿ ಗಿಡಿಕೆರೆ ರಾಮಕ್ಕ ಮುಗೇರ್ತಿ ಮತ್ತು ರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ನಾಟಿ ವೈದ್ಯೆ ಪೊಡಿಮ್ಮ ಇಂಞ ಆಯ್ಕೆಯಾಗಿದ್ದಾರೆ ಎಂದು ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.
ಡಿಸೆಂಬರ್ 30ರಿಂದ ಎರಡು ದಿನಗಳ ಕಾಲ ಕೋಣಾಜೆ ಸಮೀಪದ ದೇರಳಕಟ್ಟೆಯಲ್ಲಿ ನಡೆಯಲಿರುವ ನಾಲ್ಕನೆಯ ವೀರರಾಣಿ ಅಬ್ಬಕ್ಕ ಉತ್ಸವದ ಸಮಾರೋಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಪ್ರಶಸ್ತಿ ಪ್ರದಾನ ಮಾಡುವರು.ಪ್ರಶಸ್ತಿ ಐದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಹೊಂದಿದೆ.
ಗಿಡಿಕೆರೆ ರಾಮಕ್ಕ ಮುಗೇರ್ತಿ ತುಳು ನಾಡಿನ ಹೆಸರಾಂತ ಪಾಡ್ದನ ಗಾಯಕಿಯಾಗಿದ್ದು ಕರಾವಳಿಯ ಪರಿಶಿಷ್ಟ ಜಾತಿಯ ಮುಗೇರ ಜನಾಂಗಕ್ಕೆ ಸೇರಿದವರು. ಕಟೀಲು ಬಳಿಯ ಗಿಡಿಕೆರೆ ನಿವಾಸಿ ರಾಮಕ್ಕ , ನಿರಕ್ಷರಿಯಾಗಿದ್ದರೂ ನೂರಕ್ಕೂ ಹೆಚ್ಚು ಸುದೀರ್ಘ ಪಾಡ್ದನಗಳನ್ನು ಮತ್ತು ಹದಿನೈದಕ್ಕೂ ಹೆಚ್ಚು ಕಬಿತೆಗಳನ್ನು ಸರಾಗವಾಗಿ ಹಾಡಬಲ್ಲರು ಮತ್ತು ಸ್ವತಃ ಪಾಡ್ದನವನ್ನು ಕಟ್ಟಬಲ್ಲರು.
78ರ ವಯಸ್ಸಿನ ಪೊಡಿಮ್ಮ ಇಂಞ ಪುತ್ತೂರು ತಾಲೂಕಿನ ಕೆಮ್ಮಿಂಜೆಯ ನಿವಾಸಿ. ಬ್ಯಾರಿ ಜನಾಂಗಕ್ಕೆ ಸೇರಿರುವ ಈಕೆ ಪುತ್ತೂರಿನ ಸುತ್ತ ಮುತ್ತ, ಮೈಸೂರು ಮತ್ತು ಮಡಿಕೇರಿಗಳಲ್ಲಿ ನಾಟಿ ವೈದ್ಯೆಯಾಗಿ ಪ್ರಸಿದ್ಧರಾಗಿದ್ದಾರೆ. ಸರ್ಪ ಸುತ್ತಿನಂತಹ ದೊಡ್ಡ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಲ್ಲರು. ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಾ ಬಂದಿರುವ ಪೊಡಿಮ್ಮ ತುಳು ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ.
(ಇನ್ಫೋ ವಾರ್ತೆ)