ಮುಷ್ಕರ ಯಶಸ್ವಿ : ದೇಶಾದ್ಯಂತ ಬ್ಯಾಂಕಿಂಗ್ಸೇವೆ ಸಂಪೂರ್ಣ ಬಂದ್
ನವದೆಹಲಿ : ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಗುರುವಾರ ರಾಷ್ಟ್ರಾದ್ಯಂತ ಬ್ಯಾಂಕಿಂಗ್ ಸೇವೆ ಸ್ಥಗಿತಗೊಂಡಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿನ ಸರ್ಕಾರದ ಈಕ್ವಿಟಿಯನ್ನು ಶೇ.33 ಕ್ಕೆ ತಗ್ಗಿಸುವ ಮಸೂದೆಯನ್ನು ಸಂಸತ್ತಿನ ಮುಂದೆ ಮಂಡಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಒಂದು ದಿನದ ಮುಷ್ಕರವನ್ನು ಬ್ಯಾಂಕ್ ನೌಕರರು ನಡೆಸುತ್ತಿದ್ದಾರೆ.
ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು ಮುಷ್ಕರ ನಿರತ ನೌಕರರು ಧರಣಿ ನಡೆಸಿದರು. ಮುಷ್ಕರ ಸಂಪೂರ್ಣ ಯಶಸ್ವಿ, ದೇಶಾದ್ಯಂತ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಸ್ಥಗಿತವಾಗಿವೆ ಎಂದು ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ (ಯುಎಫ್ಬಿಯು) ದೆಹಲಿ ಸಂಘಟಕ ವಿ.ಕೆ. ಗುಪ್ತ ಪ್ರಕಟಿಸಿದ್ದಾರೆ. ಯುಎಫ್ಬಿಯು, 10 ಲಕ್ಷ ನೌಕರರನ್ನು ಪ್ರತಿನಿಧಿಸುವ ಒಂಭತ್ತು ಸಂಘಟನೆಗಳನ್ನು ಒಂದೇ ವೇದಿಕೆಯಡಿ ತಂದಿದೆ.
ದೇಶದ ಉಳಿದ ಭಾಗಗಳಲ್ಲೂ ಬಂದ್ ಯಶಸ್ವಿಯಾಗಿರುವ ವರದಿಗಳು ಬಂದಿದ್ದು, ಖಾಸಗಿ ಬ್ಯಾಂಕ್ಗಳ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ನ ನೌಕರರು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಬಂದ್ ಯಶಸ್ವಿ : ಒಂದು ದಿನದ ಬ್ಯಾಂಕ್ ಮುಷ್ಕರಕ್ಕೆ ರಾಜ್ಯದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ.
ಸುಮಾರು 2 ಸಾವಿರ ಬ್ಯಾಂಕ್ ನೌಕರರು ಜೆಸಿ ರಸ್ತೆಯ ಕೆನರಾ ಬ್ಯಾಂಕ್ನ ಪ್ರಧಾನ ಕಚೇರಿಯ ಎದುರು ಧರಣಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆನಂತರ ಮುಷ್ಕರ ನಿರತ ನೌಕರರ ಮೆರವಣಿಗೆ ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್ವರೆಗೆ ನಡೆಯಿತು. ಆದರೆ, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ಪಿಟಿಐ / ಯುಎನ್ಐ)