Get Updates
Get notified of breaking news, exclusive insights, and must-see stories!

ಇನ್ನು 3 ತಿಂಗಳಲ್ಲಿ 90 ಸಾವಿರ ಬ್ಯಾಂಕ್‌ ನೌಕರರು ಸ್ವಯಂ ನಿವೃತ್ತಿ!

*ಸುಮೀತ್‌ ಚಟರ್ಜಿ

ನವದೆಹಲಿ : ಭದ್ರತೆ, ಗೌರವ ಮತ್ತು ಹೊಟ್ಟೆ- ಬಟ್ಟೆ ಅಗತ್ಯ ಪೂರೈಸುವ ಕೆಲಸವೆಂದು ಒಂದು ಕಾಲದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸೇರಿದ ಜನ ಇವತ್ತು ಒಮ್ಮೆಲೇ ಸಿಗುವ ದೊಡ್ಡ ಮೊತ್ತದ ಚೆಕ್‌ಗಳ ಪ್ರಲೋಭನೆಗೆ ಮನಸೋತು ಕೆಲಸ ಬಿಡುತ್ತಿದ್ದಾರೆ.

ಭಾರತದ ಸಾರ್ವಜನಿಕ ವಲಯದ ಬ್ಯಾಂಕುಗಳ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಗೆ ನೌಕರರು ತೋರಿಸುತ್ತಿರುವ ಒಲವು ನೋಡಿದರೆ, ಸುಮಾರು 90 ಸಾವಿರ ಬ್ಯಾಂಕ್‌ ನೌಕರರು ಸದ್ಯದಲ್ಲೇ ಕೆಲಸ ಬಿಡಲಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಭಾರತದಲ್ಲಿ 27 ಸಾರ್ವಜನಿಕ ವಲಯದ ಬ್ಯಾಂಕುಗಳಿವೆ. ಒಟ್ಟು 8 ಲಕ್ಷದ 83 ಸಾವಿರ ಮಂದಿ ಅವುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ವಿತ್ತ ವರ್ಷ ಮುಗಿವ ಹೊತ್ತಿಗೆ ಈ ಸಂಖ್ಯೆ ಶೇ.15ರಷ್ಟು ಕರಗಲಿದೆ.

ಕಾರ್ಮಿಕ ಸಂಘಟನೆಯ ಭದ್ರ ಗೋಡೆಯಂತಿರುವ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ವಿಆರ್‌ಎಸ್‌ ಈ ಪಾಟಿ ಯಶಸ್ವಿಯಾಗುತ್ತಿರೋದು ಆಶ್ಚರ್ಯ ಹುಟ್ಟಿಸೋದು ಸಹಜ. ಆದರೆ ಯೋಜನೆ ಬಾಯಿ ನೀರೂರಿಸುವಂಥ ರೊಕ್ಕ ಕೊಟ್ಟು, ಕೆಲಸ ಬಿಡಿ ಅಂದಿದೆ. ಸಹಜವಾಗೇ ಅದರ ಆಕರ್ಷಣೆ ಕಾಂತತ್ವದ ಸೆಳೆತದಷ್ಟು ಪ್ರಬಲ. ಹಾಗಾಗಿ ಯೋಜನೆ ಯಶಸ್ವಿಯಾಗಿದೆ ಎನ್ನುತ್ತಾರೆ ಬ್ಯಾಂಕಿಂಗ್‌ ವಲಯದ ವಿಶ್ಲೇಷಕ ಅರುಣ್‌ ಗೋಯಲ್‌.

ಸಾಕಷ್ಟು ಹೋಂವರ್ಕ್‌ ಮಾಡಿದ ನಂತರ ಭಾರತೀಯ ಬ್ಯಾಂಕುಗಳ ಒಕ್ಕೂಟ (ಐಬಿಎ) ವಿಆರ್‌ಎಸ್‌ ಪರಿಚಯಿಸಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ತಾಂತ್ರಿಕ ಅಭಿವೃದ್ಧಿಗೆ ಒತ್ತು ಕೊಡಬೇಕಾಗಿರುವುದರಿಂದ ನೌಕರರ ಸಂಖ್ಯೆ ಇಳಿಸಬೇಕಾದ್ದು ಅಗತ್ಯವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿತ್ತ ಸಚಿವ ಯಶವಂತ ಸಿನ್ಹ ಈಚೆಗೆ ಇದಕ್ಕೆ ಹಸಿರು ನಿಶಾನೆ ತೋರಿದರು ಎಂಬುದು ಗೋಯಲ್‌ ವಿವರಣೆ.

ಯೋಜನೆ ವಿವರ ಹೀಗಿದೆ ......

  • ಈ ವರ್ಷದ ಸೆಪ್ಟೆಂಬರ್‌ನಿಂದ ಜಾರಿಯಲ್ಲಿರುವ ಈ ಯೋಜನೆ ಮಾರ್ಚಿ 31, 2001ರವರೆಗೂ ಮುಂದುವರೆಯಲಿದೆ.
  • 40 ವರ್ಷ ಮೇಲ್ಪಟ್ಟ ಹಾಗೂ 15 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಬ್ಯಾಂಕ್‌ ನೌಕರರು ಮಾತ್ರ ಯೋಜನೆಯ ಲಾಭ ಪಡೆಯಲರ್ಹರು.
  • ಅವರು ಸೇವೆ ಮಾಡಿರುವ ವರ್ಷಗಳು, ಬಾಕಿ ಇರುವ ಸೇವಾವಧಿ- ಇವುಗಳಲ್ಲಿ ಯಾವುದು ಚಿಕ್ಕದೋ ಅದಕ್ಕೆ ವರ್ಷಕ್ಕೆ ಎರಡು ತಿಂಗಳ ಸಂಬಳದಂತೆ ಲೆಕ್ಕ ಹಾಕಿ ಒಟ್ಟು ಮೊತ್ತ ಕೊಡಲಾಗುತ್ತದೆ.
  • ಯೋಜನೆಯನ್ವಯ ನೌಕಕರಿಗೆ ತಲಾ 6 ರಿಂದ 7.5 ಲಕ್ಷ ರುಪಾಯಿ ಸಿಗುತ್ತದೆ.
  • ಇದಲ್ಲದೆ ಇತರೆ ಭತ್ಯೆಗಳು ಸಂದಾಯವಾಗುತ್ತವೆ.
  • ಮೊತ್ತವನ್ನು ಪೂರ್ಣ ಸಂದಾಯ ಮಾಡುವ ಅಥವಾ ಅರ್ಧ ಸಂದಾಯ ಮಾಡಿ, ಉಳಿದರ್ಧ ಬಾಂಡ್‌- ಡೆಪಾಸಿಟ್‌ ರೂಪದಲ್ಲಿ ಕೊಡುವ ನಿರ್ಧಾರವನ್ನು ಬ್ಯಾಂಕುಗಳಿಗೇ ಬಿಡಲಾಗಿದೆ.
  • ಆಯಾ ಬ್ಯಾಂಕಿನ ಮಂಡಲಿ ಪ್ರತಿನಿಧಿಗಳಿಗೆ ಯೋಜನೆಯ ಅರ್ಜಿಯನ್ನು ಪರಿಗಣಿಸುವ ಅಥವಾ ತಿರಸ್ಕರಿಸುವ ಸಂಪೂರ್ಣ ಹಕ್ಕಿದೆ.
ಭಾರತದ ನಂಬರ್‌ ಒನ್‌ ಬ್ಯಾಂಕ್‌- ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಅದರ ಸಹಯೋಗಿ ಬ್ಯಾಂಕ್‌ಗಳು, ಬ್ಯಾಂಕ್‌ ಆಫ್‌ ಬರೋಡ, ಕೆನರಾ ಬ್ಯಾಂಕ್‌, ಯೂಕೋ ಬ್ಯಾಂಕ್‌, ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಇಂಡಿಯನ್‌ ಬ್ಯಾಂಕ್‌ ಹೊರತುಪಡಿಸಿ ಮಿಕ್ಕೆಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕಳೆದೆರಡು ತಿಂಗಳಿಂದ ಯೋಜನೆ ಜಾರಿಗೆ ತಂದಿವೆ.

ಬ್ಯಾಂಕ್‌ ಆಫ್‌ ಇಂಡಿಯಾದ 7000, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ 6000 ನೌಕರರು ಸ್ವಯಂ ನಿವೃತ್ತರಾಗಲು ಒಪ್ಪಿದ್ದಾರೆ. ಪಂಜಾಬ್‌ ಹಾಗೂ ಸಿಂಧ್‌ ಬ್ಯಾಂಕ್‌ನಲ್ಲೂ ಶೇ.13.5ರಷ್ಟು ನೌಕರರು ಕೆಲಸ ಬಿಡಲು ಸಿದ್ಧರಿದ್ದಾರೆ. ಯೋಜನೆಗಾಗಿ 130 ಬಿಲಿಯನ್‌ ರುಪಾಯಿ ಖರ್ಚಾಗುವ ನಿರೀಕ್ಷೆಯಿದೆ.

ಯೋಜನೆ ಯಶಸ್ವಿಯಾದ ನಂತರ ಬ್ಯಾಂಕುಗಳು ಸುಮ್ಮನೆ ಕೈಕಟ್ಟಿ ಕೂರುವಂತಿಲ್ಲ. ತಾಂತ್ರಿಕವಾಗಿ ಮುಂದುವರೆದು ವಹಿವಾಟು ಹೆಚ್ಚಿಸಬೇಕು ಎಂಬುದು ಅರುಣ್‌ ಗೋಯಲ್‌ ಸಲಹೆ.

ಬಾಲಂಗೋಚಿ : (ನಮ್ಮ ಬ್ಯಾಂಕಾಕಾಂಕ್ಷಿ ವಿದ್ಯಾರ್ಥಿಗಳಿಗೆ ಮಾತ್ರ) ಬಿ ಕಾಮು- ಬ್ಯಾಂಕ್‌ ಎಕ್ಸಾಮು ಅಂತ ತಲೆ ಕೆಡಿಸಿಕೊಳ್ಳದೆ ಮರ್ಯಾದೆಯಾಗಿ ಬ್ಯಾಂಕಿಗೆ ಸಂಬಂಧಿಸಿದ ಸಾಫ್ಟ್‌ವೇರ್‌ ಕಲಿತುಕೊಳ್ಳೋದು ಒಳ್ಳೇದು.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+