ಪುಲಿಕೇಶಿ ಪಡೆ : ವಿದ್ಯುತ್ ಕಳ್ಳರ ಹಿಡಿಯಲು ನಿಗಮದ ಹೊಸ ಅಸ್ತ್ರ
ಬೆಂಗಳೂರು : ಕರ್ನಾಟಕದಲ್ಲಿ ಕಳೆದ ವರ್ಷ 3600 ವಿದ್ಯುತ್ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಇದಕ್ಕಾಗಿ 16 ಕೋಟಿ ರುಪಾಯಿ ಹೆಚ್ಚುವರಿ ದಂಡ ವಿಧಿಸಲಾಗಿದೆ. ಇತ್ತೀಚೆಗೆ ಹೆಚ್ಚುತ್ತಿರುವ ವಿದ್ಯುತ್ ಕಳವು ಪ್ರಕರಣಗಳ ಪತ್ತೆಗೆ ‘ಪುಲಿಕೇಶಿ ಪಡೆ’ಗಳನ್ನು ರಚಿಸಲು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ (ಕೆಪಿಟಿಸಿ)ನಿರ್ಧರಿಸಿದೆ.
ಸಿಪಿಆರ್ಐ ಸಭಾಂಗಣದಲ್ಲಿ ಸೋಮವಾರ ಪ್ರಾರಂಭವಾದ ಭಾರತೀಯ ಉದ್ಯಮಗಳಲ್ಲಿ ವಿದ್ಯುತ್ ಉಳಿತಾಯ ಎಂಬ ವಿಷಯ ಕುರಿತ 2 ದಿನಗಳ ಅವಧಿಯ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಕೆಪಿಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪಿ. ಬಳಿಗಾರ್ ಈ ವಿಷಯ ತಿಳಿಸಿದರು.
ನಿಗಮದ 15 ವಿಭಾಗಗಳಿಗೆ ಒಂದರಂತೆ ಪುಲಿಕೇಶಿ ಪಡೆ ರಚಿಸಲಾಗುವುದು. ವಿದ್ಯುತ್ ಕಳುವನ್ನು ಪತ್ತೆ ಮಾಡಿ, ಅದಕ್ಕೆ ತಕ್ಕ ದಂಡ ವಿಧಿಸಲಾಗುವುದು ಎಂದರು. ಅಧಿಕ ವಿದ್ಯುತ್ ಬಳಕೆಗೆ ಕಡಿವಾಣ ಹಾಕಲು ಭಾಗ್ಯಜ್ಯೋತಿ ಯೋಜನೆಯಡಿ ವಿದ್ಯುತ್ ಸೌಕರ್ಯ (ಶೇ.18ರಷ್ಟು ಉಚಿತ ವಿದ್ಯುತ್) ಪಡೆದಿರುವ ಮನೆಗಳಿಗೆ ಮುಂದಿನ ವರ್ಷದಿಂದ ಕಡ್ಡಾಯವಾಗಿ ಮೀಟರ್ ಅಳವಡಿಸಲಾಗುವುದು. ಆದರೆ ತಕ್ಷಣಕ್ಕೆ ವಿದ್ಯುತ್ ದರದಲ್ಲಿ ಯಾವ ಏರಿಕೆಯೂ ಇರುವುದಿಲ್ಲ ಎಂದು ಹೇಳಿದರು.
ಕೈಗಾರಿಕೆಗಳಾವುವೂ ನಿಗಮಕ್ಕೆ ಕಟ್ಟಬೇಕಾದ ಹಣ ಬಾಕಿ ಉಳಿಸಿಲ್ಲ. ಆದರೆ ಕೋಲಾರದ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಮತ್ತು ಬೆಂಗಳೂರು ನೀರು ಸರಬರಾಜು ಮಂಡಳಿ ಕ್ರಮವಾಗಿ 40 ಕೋಟಿ ಹಾಗೂ 130 ಕೋಟಿ ರುಪಾಯಿ ಬಾಕಿ ಕಟ್ಟಬೇಕಿವೆ. ರೈತರಿಂದ 474 ಕೋಟಿ ರುಪಾಯಿ ಬಾಕಿ ಬರಬೇಕಿದೆ ಎಂದು ಪ್ರಶ್ನೆಯಾಂದಕ್ಕೆ ಉತ್ತರ ಕೊಟ್ಟರು.
ಸದ್ಯದಲ್ಲೇ ಶೇ. 23ರಷ್ಟು ವಿದ್ಯುತ್ ದರ ಹೆಚ್ಚಳ ? : ಶೇ.23ರಷ್ಟು ವಿದ್ಯುತ್ ದರ ಏರಿಸುವಂತೆ ನಿಗಮವು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ವಿದ್ಯುತ್ ದರ ಏರಿಕೆಗೆ 120 ತಕರಾರು ಅರ್ಜಿಗಳು ಬಂದಿರುವುದರಿಂದ ಆಯೋಗ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ . ಬೆಲೆ ಏರಿಸುವುದು, ಬಿಡುವುದು ಆಯೋಗಕ್ಕೆ ಸಂಬಂಧಪಟ್ಟಿದ್ದು ಎಂದು ತಿಳಿಸಿದರು.
(ಇನ್ಫೋ ವಾರ್ತೆ)