ಆಲಮಟ್ಟಿ ಅಣೆಕಟ್ಟೆ ಜನವರಿಯಲ್ಲಿ ರಾಷ್ಟ್ರಕ್ಕೆ ಅರ್ಪಣೆ : ಎಸ್.ಎಂ. ಕೃಷ್ಣ
ಕೊರ್ತಿ : ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಅಣೆಕಟ್ಟೆಯನ್ನು ಜನವರಿಯಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಂಗಳವಾರ ಇಲ್ಲಿ ತಿಳಿಸಿದ್ದಾರೆ. ಕೃಷ್ಣ ಎರಡನೆ ಹಂತದ ಯೋಜನೆಗೆ ಅನುಮತಿ ದೊರಕಿದ್ದು, ಕೇಂದ್ರ ಸರಕಾರ 800 ಕೋಟಿ ರುಪಾಯಿ ಮಂಜೂರು ಮಾಡಿದೆ ಎಂದರು.
ಕೃಷ್ಣ ಮೇಲ್ದಂಡೆ ಯೋಜನೆಯಿಂದ ನಿರ್ವಸಿತರಾಗುವವರ ನಿರ್ವಸತಿಗಾಗಿ 1000 ಕೋಟಿ ರುಪಾಯಿಗಳ ಯೋಜನೆಯನ್ನು ಸಿದ್ಧಪಡಿಸಲಾಗುವುದು ಹಾಗೂ ಮರುವಸತಿ ಗ್ರಾಮಗಳಿಗೆ ಏತ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದರು. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕೃಷ್ಣ ಯೋಜನೆಗೆ ಮರುಚಾಲನೆ ನೀಡಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ ಎಂದ ಕೃಷ್ಣ , ಯೋಜನೆ ತ್ವರಿತಗತಿಯಲ್ಲಿ ಸಾಗಲು ಪ್ರತಿಪಕ್ಷಗಳು ಪಕ್ಷಾತೀತವಾಗಿ ಸಹಕರಿಸಿದರೂ ಎಂದೂ ಕೊಂಡಾಡಿದರು.
ಬೀಳಗಿ ತಾಲೂಕಿನ ಕೊರ್ತಿ - ಕೊಲ್ಹಾರ ಸೇತುವೆಯ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದಕ್ಷಿಣ ಭಾರತದಲ್ಲಿಯೇ ಅತ್ಯಂತ ಉದ್ದವಾದ ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗಲಿರುವ ಕೊರ್ತಿ - ಕೊಲ್ಹಾರ ಸೇತುವೆಗೆ 36 ಕೋಟಿ ರುಪಾಯಿ ವೆಚ್ಚ ತಗುಲಲಿದ್ದು, ಕಾಮಗಾರಿಯನ್ನು 30 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಲೋಕೋಪಯೋಗಿ ಸಚಿವ ಧರ್ಮಸಿಂಗ್, ಪೌರಾಡಳಿತ ಸಚಿವ ಮಲ್ಲಿಕಾರ್ಜುನ ನಾಗಪ್ಪ, ನಗರಾಭಿವೃದ್ಧಿ ಸಚಿವ ಚಿಮ್ಮನಕಟ್ಟಿ, ನೀರಾವರಿ ಸಚಿವ ಎಚ್.ಕೆ. ಪಾಟೀಲ್, ಸಂಸದ ಆರ್.ಎಸ್. ಪಾಟೀಲ್, ಸಚಿವ ಕಾಶಪ್ಪನವರ್ ಮೊದಲಾದವರು ಪಾಲ್ಗೊಂಡಿದ್ದರು.