ಐಎಸ್ಡಿ ಮೇಲಿನ ವಿಎಸ್ಎನ್ಎಲ್ನ ಏಕಸ್ವಾಮ್ಯ ತೆಗೆಯಲು ನಿರ್ಧಾರ
ನವದೆಹಲಿ : ಬರುವ 2002ನೇ ಇಸವಿಯ ಏಪ್ರಿಲ್ ಒಂದರಿಂದ ಅಂತಾರಾಷ್ಟ್ರೀಯ ಕರೆಗಳ ಮೇಲಿನ ವಿಎಸ್ಎನ್ಎಲ್ನ ಏಕಸ್ವಾಮ್ಯ ತೆಗೆಯಲು ಸರಕಾರ ನಿರ್ಧರಿಸಿದೆ ಎಂದು ಸಂಪರ್ಕ ಸಚಿವ ರಾಂ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಈ ಸಂಬಂಧ ಗುರುವಾರ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಸಚಿವರು, ವಿಎಸ್ಎನ್ಎಲ್ಗೆ ನೀಡುವ ಪರಿಹಾರ ಯೋಜನೆಗೂ ಸರಕಾರ ಒಪ್ಪಿಗೆ ನೀಡಿದೆ. ಇಂಟರ್ನೆಟ್ ಸೇವೆ ಕಲ್ಪಿಸುವ ವಿಎಸ್ಎನ್ಎಲ್ ಅನ್ನು ಏ ದರ್ಜೆ ವ್ಯಾಪ್ತಿಗೆ ತರಲಾಗಿದ್ದು, ದೇಶಾದ್ಯಂತ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಗೆ ಅನುಮತಿ ಕಲ್ಪಿಸಲಾಗಿದೆ. ಪರಿಹಾರ ಯೋಜನೆ ಅನ್ವಯ ರಾಷ್ಟ್ರಾದ್ಯಂತ ದೂರದ ದೂರವಾಣಿ ಸೇವೆಗಳನ್ನು ಕಲ್ಪಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಹೋಟೆಲ್ ಮಾರಾಟಕ್ಕೆ ಟೆಂಡರ್: ನಷ್ಟದಲ್ಲಿ ನಡೆಯುತ್ತಿರುವ ಸರಕಾರಿ ಸ್ವಾಮ್ಯದ ಸ್ಟಾರ್ ಹೋಟೆಲ್ಗಳ ಮಾರಾಟಕ್ಕೆ ಅಂತಾರಾಷ್ಟ್ರೀಯ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದು ಬಂಡವಾಳ ಹಿಂತೆಗೆತ ಸಚಿವ ಅರುಣ್ ಶೌರಿ ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಒಂದರಲ್ಲೇ 45 ಕೋಟಿ ರುಪಾಯಿ ನಷ್ಟವಾಗಿದ್ದು, ದೇಶಾದ್ಯಂತ ಇರುವ ಎಲ್ಲಾ 26 ಹೋಟೆಲ್ಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದೆ. ವಿದೇಶಿ ಹೂಡಿಕೆದಾರರಿಗೆ ಶೇಕಡಾ 51ರಷ್ಟು ಶೇರು ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಭಾರತದೊಳಗಿನ ಬಂಡವಾಳಗಾರರು ಶೇಕಡಾ 49ರಷ್ಟು ಬಂಡವಾಳ ಹೂಡಬಹುದಾಗಿದೆ. ವಿದೇಶಿ ಹೂಡಿಕೆದಾರರ ಜೊತೆ ಜಂಟಿಯಾಗಿಯೂ ದೇಶೀಯ ಹೂಡಿಕೆದಾರರು ಬಂಡವಾಳ ಹೂಡಬಹುದಾಗಿದೆ ಎಂದು ಶೌರಿ ತಿಳಿಸಿದ್ದಾರೆ.