ಐ.ಟಿ. ಪಾರ್ಕ್ ನಗರ ಬೆಂಗಳೂರಲ್ಲಿಸಿದ್ಧ ಉಡುಪು ಪಾರ್ಕ್ - ರಾಣಾ
ಬೆಂಗಳೂರು : ಸುಸಜ್ಜಿತ ಹಾಗೂ ಅತ್ಯಾಧುನಿಕ ಐಟಿ ಪಾರ್ಕ್ ಹೊಂದಿರುವ ಬೆಂಗಳೂರೂ ಸೇರಿದಂತೆ ದೇಶದ ನಾಲ್ಕು ನಗರಗಳಲ್ಲಿ ಸಿದ್ಧ ಉಡುಪುಗಳ ಪಾರ್ಕ್ ಸ್ಥಾಪಿಸಲಾಗುವುದು ಎಂದು ಕೇಂದ್ರ ಜವಳಿ ಖಾತೆ ಸಚಿವ ಕಾಶೀರಾಂ ರಾಣಾ ತಿಳಿಸಿದ್ದಾರೆ.
ದೆಹಲಿ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಇದಕ್ಕಾಗಿ ಸೂಕ್ತ ಸ್ಥಳಗಳ್ನೂ ಆಯ್ಕೆ ಮಾಡಲಾಗುವುದು ಎಂದು ಶನಿವಾರ ಸಚಿವರು ಹೇಳಿದ್ದಾರೆ. ರಾಜ್ಯ ಜವಳಿ ಗಿರಣಿ ಉದ್ಯಮಿಗಳ ಸಂಘದ ಸರ್ವ ಸದಸ್ಯರ ಸಭೆಯ ಸಂದರ್ಭದಲ್ಲಿ ನಡೆದ ಜವಳಿ ಉದ್ಯಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ವಿತ್ತ ವ್ಯವಸ್ಥೆಯಲ್ಲಿ ಜವಳಿ ಉದ್ಯಮ ಪ್ರಮುಖ ಪಾತ್ರ ವಹಿಸುತ್ತಿದೆ ಎಂದೂ ಅವರು ತಿಳಿಸಿದರು.
ದೇಶದಲ್ಲಿ ಸುಮಾರು 3.50 ಕೋಟಿ ಜನರು ಜವಳಿ ಉದ್ಯಮದಲ್ಲಿ ತೊಡಗಿದ್ದಾರೆ. ಕೃಷಿಯ ನಂತರ ಅತಿ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿರುವುದು ಜವಳಿ ಉದ್ಯಮ ಎಂದು ಅವರು ಹೇಳಿದರು. ಜವಳಿ ಗಿರಣಿಗಳ ಕಾರ್ಮಿಕರ ಪುನರ್ವಸತಿಗೆ ಪ್ರತ್ಯೇಕ ನಿಧಿ ಸ್ಥಾಪಿಸಲಾಗಿದೆ ಎಂದ ಅವರು, ಸಿದ್ಧ ಉಡುಪು ರಂಗವನ್ನು ಸಣ್ಣ ಕೈಗಾರಿಕೆಗಳಿಗೆ ಮಾತ್ರ ಸೀಮಿತಗೊಳಿಸದೆ, ಎಲ್ಲ ಕೈಗಾರಿಕೆಗಳಿಗೂ ಅವಕಾಶ ಕಲ್ಪಿಸಲು ಯೋಜಿಸಲಾಗಿದೆ ಎಂದರು.
ವಿಚಾರ ಸಂಕಿರಣದಲ್ಲಿ ಸಂಘದ ಅಧ್ಯಕ್ಷ ಸಿ. ವೆಳ್ಳಿಯಪ್ಪ, ಅಗರವಾಲ್ ಮೊದಲಾದವರು ಪಾಲ್ಗೊಂಡಿದ್ದರು.