ಕಾರ್ಕಳದ ಗೊಮ್ಮಟನಿಗೆ ಕಪ್ಪು ಪಾಚಿ ಕಾಟ
ಕಾರ್ಕಳ : ಸ್ಮಾರಕಗಳ ಸಂರಕ್ಷಣೆ ಬಗ್ಗೆ ನಮ್ಮ ಜಾಗೃತಿ ಲೋಕ ಪ್ರಸಿದ್ಧವಾದುದು. ಇದಕ್ಕೆ ಸಾಕ್ಷಿಯಾಗಿ ಹಂಪೆ ಕಣ್ಣ ಮುಂದಿದೆ. ಆನೆಗೊಂದಿ ಸೇತುವೆ ನಿರ್ಮಾಣ ನಿಲ್ಲಿಸದಿದ್ದರೆ ಹಂಪೆಯನ್ನು ವಿಶ್ವ ಪರಂಪರೆ ಪಟ್ಟಿಯಿಂದ ಕೈ ಬಿಡುವುದಾಗಿ ಬೆದರಿಸಿದ್ದರೂ, ಸರ್ಕಾರ ಸೇತುವೆ ಕೆಡವಲು ಹಿಂದೆ ಮುಂದೆ ನೋಡುತ್ತಿದೆ. ಅದೆಲ್ಲಾ ನಮಗೆ ಸಂಬಂಧಿಸಿದ್ದೇ ಅಲ್ಲವೇನೋ ಅನ್ನುವಂತೆ ಜನ ತಂತಮ್ಮ ಕೆಲಸಗಳಲ್ಲಿ ವ್ಯಸ್ತವಾಗಿದ್ದಾರೆ. ಇಂಥದ್ದೇ ನಿರ್ಲಕ್ಷದ ಮತ್ತೊಂದು ಮಾದರಿ ಇಲ್ಲಿದೆ. ಈ ನಿರ್ಲಕ್ಷ್ಯಕ್ಕೆ ತುತ್ತಾಗಿರುವುದು ಬಯಲನ್ನೇ ಬಟ್ಟೆಯೆಂದು ಬಗೆದ ಗೊಮ್ಮಟ.
ಕರ್ನಾಟಕದಲ್ಲಿನ ಪ್ರಮುಖ ಜೈನ ಕೇಂದ್ರಗಳನ್ನು ಹೆಸರಿಸುವಾಗ ಕಾರ್ಕಳವನ್ನು ಮರೆತು ಮುನ್ನಡೆವಂತಿಲ್ಲ . ಅಲ್ಲಿನ 12.8 ಮೀಟರ್ ಎತ್ತರದ ಗೊಮ್ಮಟನಂತೂ ಲೋಕ ಪ್ರಸಿದ್ಧ . ಅಂಥ ಗೊಮ್ಮಟ ಮೂರ್ತಿಯೀಗ ಕಳೆಗುಂದುತ್ತಿದೆ. ಮೂರ್ತಿಯ ಮೇಲೆ ಕಪ್ಪು ಪಾಚಿ ಕಟ್ಟುತ್ತಿದೆ ಎಂದು ಸ್ಥಳೀಯರು ಆಪಾದಿಸುತ್ತಿದ್ದಾರೆ.
ಕಳೆದ ಎರಡು ಮೂರು ವರ್ಷಗಳಿಂದ ಪಾಚಿ ಬೆಳೆಯುತ್ತಿದ್ದರೂ ಸ್ಥಳೀಯ ಆಡಳಿತವಾಗಲೀ, ಪ್ರವಾಸೋದ್ಯಮ ಇಲಾಖೆಯಾಗಲೀ ಗೊಮ್ಮಟನನ್ನು ಪಾಚಿಯಿಂದ ರಕ್ಷಿಸುವ ಗೋಜಿಗೆ ಹೋಗಿಲ್ಲ . ಪರಿಸ್ಥಿತಿ ಹೀಗೇ ಮುಂದುವರಿದರೆ 568 ವರ್ಷ ಗಳ ಸ್ಮಾರಕ ಹಾಳಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತ ಪಡಿಸುತ್ತಾರೆ. ಅವರ ಆತಂಕಕ್ಕೆ ಪ್ರವಾಸೋದ್ಯಮ ಇಲಾಖೆ ಏನನ್ನುತ್ತದೆ?
(ಇನ್ಫೋ ವಾರ್ತೆ)