ಬಾಬಾ ಬುಡನ್ಗಿರಿಯಲ್ಲಿ ಶಾಂತಿಯುತವಾಗಿ ದತ್ತಜಯಂತಿ ಆರಂಭ
ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ಗಿರಿಯ ದತ್ತ ಪೀಠದಲ್ಲಿ ಶುಕ್ರವಾರ ಆರಂಭಗೊಂಡಿರುವ ಮೂರು ದಿನಗಳ ದತ್ತ ಜಯಂತಿಯ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಎಂದು ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಶುಕ್ರವಾರ ಆರಂಭಗೊಂಡ ದತ್ತ ಜಯಂತಿ ಶಾಂತಿಯುತವಾಗಿದೆ ಎಂದ ಅವರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ ಎಂದರು. ಹಿಂದೂ ಪರ ಸಂಘಟನೆಯಾಂದು ಮುಸ್ಲಿಮರ ಹಿಡಿತದಿಂದ ದತ್ತ ಪೀಠವಿರುವ ಬೆಟ್ಟವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಕೋಮು ಸೌಹಾರ್ದದ ಸಂಕೇತವಾಗಿರುವ ಬೆಟ್ಟದಲ್ಲಿ ಸತತ ಮೂರನೆ ವರ್ಷವೂ ಕಟ್ಟೆಚ್ಚರ ವಹಿಸಲಾಗಿದ್ದು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರಂಜಾನ್ ತಿಂಗಳಿನಲ್ಲೇ ನಡೆಯುವ ದತ್ತ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವಂತೆ ಖರ್ಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ಎರಡೂ ಕೋಮಿನ ನಾಯಕರುಗಳ ಸಭೆ ನಡೆಸಲಾಗಿದೆ ಎಂದೂ ತಿಳಿಸಿದ್ದಾರೆ.
ವೀರಪ್ಪನ್ : ವೀರಪ್ಪನ್ ಶಿಕಾರಿ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆಯ ಕಾರ್ಯತಂತ್ರದಲ್ಲಿ ಸರಕಾರವು ಮೂಗು ತೂರಿಸುವುದಿಲ್ಲ ಎಂದೂ ಖರ್ಗೆ ಹೇಳಿದ್ದಾರೆ. ವಿಶೇಷ ಕಾರ್ಯಪಡೆಗೆ ಅಗತ್ಯವಾದ ಎಲ್ಲ ನೆರವನ್ನೂ ಸರಕಾರ ನೀಡುವುದು ಎಂದ ಅವರು, ಸೂಕ್ತ ಸಮಯದಲ್ಲಿ ಪಡೆಯ ನೆರವಿಗೆ ಗಡಿ ಭದ್ರತಾ ಪಡೆಯ ತುಕಡಿಗಳು ಆಗಮಿಸಲಿವೆ ಎಂದರು. (ಯುಎನ್ಐ)
ಮುಖಪುಟ / ಇವತ್ತು... ಈ ಹೊತ್ತು...