ಆರ್ಟಿಪಿಎಸ್ ಬೂದಿ ಹೊಂಡ ಒಡೆದು 20ಲಕ್ಷಕ್ಕೂ ಹೆಚ್ಚು ಹಾನಿ
ರಾಯಚೂರು : ಇಲ್ಲಿನ ರಾಯಚೂರು ಶಾಖೋತ್ಪನ್ನ ಕೇಂದ್ರದ ಬೂದಿ ಹೊಂಡ ಒಡೆದು ಹೋಗಿರುವುದರಿಂದ ನೀರು ಬೂದಿ ರಭಸದಿಂದ ಕೃಷ್ಣಾ ನದಿಯತ್ತ ಹರಿಯುತ್ತಿದ್ದು, ಸುಮಾರು 20 ಲಕ್ಷ ರೂಪಾಯಿಗೂ ಹಾನಿಯಾಗಿರುವುದಲ್ಲದೆ ಸುತ್ತ ಮುತ್ತಲಿನ ಪರಿಸರದ ಮೇಲೂ ಪರಿಣಾಮ ಬೀರಿರುವುದಾಗಿ ವರದಿಯಾಗಿದೆ.
ಹರಿಯುತ್ತಿರುವ ನೀರು ಬೂದಿಯನ್ನು 24 ಗಂಟೆಯಾಳಗೆ ಅಂದರೆ ಮಂಗಳವಾರ ಸಂಜೆಯಾಳಗೆ ತಡೆಯಲು ಸಾಧ್ಯವಾಗದೇ ಇದ್ದರೆ ಆರ್ಟಿಪಿಎಸ್ನ ಐದು ಮತ್ತು ಆರನೇ ಘಟಕದ ಕೆಲಸವನ್ನು ಸ್ಥಗಿತಗೊಳಿಸಲಾಗುವುದು. ಬೂದಿ ಹೊಂಡದ ದುರಸ್ತಿಗೆ ಸುಮಾರು 14 ಲಕ್ಷ ರೂಪಾಯಿ ಖರ್ಚಾಗುವ ನಿರೀಕ್ಷೆ ಇದೆ ಎಂದು ಆರ್ಟಿಪಿಎಸ್ ಸಿಬ್ಬಂದಿ ಹೇಳಿದ್ದಾರೆ.
ನೀರು ಬೂದಿ ಕೃಷ್ಣಾ ನದಿಯನ್ನು ಸೇರಿದಲ್ಲಿ , ಕಲುಷಿತಗೊಂಡ ನೀರಿನಿಂದಾಗಿ ಜಲ ಚರ ಪ್ರಾಣಿಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಶಕ್ತಿ ನಗರ ಪಕ್ಕದ ಯಡ್ಲಾಪುರದ ಜನರೂ ಆತಂಕದ ಪರಿಸ್ಥಿತಿಯಲ್ಲಿದ್ದಾರೆ. ಬೂದಿ ಹೊಂಡ ಒಡೆದುಹೋಗಲು ಕಳಪೆ ಕಾಮಗಾರಿಯೇ ಕಾರಣ ಎಂದು ಶಂಕಿಸಲಾಗಿದೆ.
ವಿದ್ಯುತ್ ಉತ್ಪಾದನೆಯ ನಂತರ ಉಂಟಾಗುವ ತ್ಯಾಜ್ಯ ವಸ್ತು , ಕಲ್ಲಿದ್ದಲಿನ ಬೂದಿ(ಸ್ಲರಿ) ಗಾಳಿಯಲ್ಲಿ ಹಾರಿ ಹೋಗದಂತೆ ಅದನ್ನು ನೀರಿನಲ್ಲಿ ಬೆರೆಸಿ ಕೊಳವೆ ಮೂಲಕ ಆ್ಯಷ್ ಪಾಂಡ್ಗೆ ಹರಿಯಬಿಡಲಾಗುತ್ತದೆ. ಸುಮಾರು 300 ಅಡಿ ಎತ್ತರದ ಬೂದಿ ಹೊಂಡ ಒಡೆದು ಹೋಗಿರುವುದರಿಂದ ಸುತ್ತ ಮುತ್ತಲಿನ ಪ್ರದೇಶದಲ್ಲೆಲ್ಲಾ ಸ್ಲರಿ ತುಂಬಿಕೊಂಡಿದೆ.
(ಇನ್ಫೋ ವಾರ್ತೆ)