ದತ್ತಪೀಠ : ಹಿಂದೂ- ಮುಸ್ಲಿಂ ಪದ್ಧತಿಯಲ್ಲಿ ಪೂಜೆಗೆ ನಿರ್ವಹಣಾ ಸಮಿತಿ
ಬಾಬಾ ಬುಡನಗಿರಿ : ಇಲ್ಲಿನ ದತ್ತ ಪೀಠದ ದೈನಂದಿನ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ನಿರ್ವಹಣಾ ಸಮಿತಿಯಾಂದನ್ನು ರಚಿಸಲು ಸೋಮವಾರ ನಡೆದ ಶಾಂತಿಸಭೆ ನಿರ್ಧರಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಬಿ. ಚಂದ್ರೇ ಗೌಡ ಮತ್ತು ಸಾರಿಗೆ ಸಚಿವ ಸಿ.ಆರ್. ಸಗೀರ್ ಆಹ್ಮದ್ ಅವರ ಉಪಸ್ಥಿತಿಯಲ್ಲಿ ದತ್ತ ಪೀಠದ ಬಳಿ ನಡೆದ ಶಾಂತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯು, ದತ್ತ ಪೀಠದಲ್ಲಿ ಪ್ರತಿದಿನ ಎರಡೂ ಸಂಪ್ರದಾಯಗಳಿಗೆ ಅನುಗುಣವಾಗಿ ಪೂಜೆ ಸಲ್ಲಿಕೆ, ಆಡಳಿತ ನಿರ್ವಹಣೆ, ದತ್ತ ಜಯಂತಿ, ಉರುಸ್ ಮುಂತಾದ ಚಟುವಟಿಕೆಗಳನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತುಕೊಂಡಿದೆ.
ಪ್ರತಿವರ್ಷ ದತ್ತ ಪೀಠದಲ್ಲಿ ನಡೆಯಬೇಕಾಗಿರುವ ಕಾರ್ಯಕ್ರಮಗಳನ್ನು ಸಮಿತಿಯೇ ನೋಡಿಕೊಳ್ಳಲಿದ್ದು, ಸಮಿತಿಗೆ ಶಾಸನ , ಕಾನೂನು ಬದ್ಧ ಮನ್ನಣೆ ನೀಡಲು ಶಾಂತಿ ಸಭೆಯಲ್ಲಿ ನಿರ್ಧರಿಸಲಾಯಿತು. ಸಮಿತಿ ತೆಗೆದುಕೊಂಡಿರುವ ನಿರ್ಧಾರಗಳಿಗೆ ಅದು ಬದ್ಧವಾಗಿರದಿದ್ದಲ್ಲಿ ಸರಕಾರ ತನ್ನ ಕೆಲಸವನ್ನು ಮಾಡುವಲ್ಲಿ ಹಿಂದೆ ಬೀಳುವುದಿಲ್ಲ ಎಂದು ಸಭೆಯಲ್ಲಿದ್ದ ಸಚಿವರು ಹೇಳಿದರು. ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಚ್. ಗೋಪಾಲ ಕೃಷ್ಣೇ ಗೌಡ, ಪೊಲೀಸ್ ಮುಖ್ಯಾಧಿಕಾರಿ ಡಾ. ರಾಮಚಂದ್ರ ರಾವ್ ಉಪಸ್ಥಿತರಿದ್ದರು.
(ಇನ್ಫೋವಾರ್ತೆ)