ರಾಜ್- ಕಮಲ್ರ ಭಾವನಾತ್ಮಕ ಭೇಟಿಯ ಸುತ್ತಾ...
ಹೀಗೆ ತಮ್ಮ ಮಾತಿನ ಲಹರಿಯನ್ನು ಹರಿಸಿದವರು ಖ್ಯಾತ ನಟ ಕಮಲ್ ಹಾಸನ್. ಹಿಂದಿ ಮತ್ತು ತಮಿಳಿನಲ್ಲಿ ತಯಾರಾಗುತ್ತಿರುವ ಅಭಯ್ ಚಿತ್ರದ ಚಿತ್ರೀಕರಣದ ಮಧ್ಯೆ ಒಂದು ದಿನದ ಮಟ್ಟಿಗೆ ಬುಧವಾರ ಬೆಂಗಳೂರಿಗೆ ಬಂದಿಳಿದ ಕಮಲ್ 108 ದಿನಗಳ ಅಜ್ಞಾತವಾಸದ ನಂತರ ನಾಡಿಗೆ ಮರಳಿರುವ ರಾಜ್ಕುಮಾರ್ ಅವರನ್ನು ಭೇಟಿ ಮಾಡಿದರು.
ಶಿವಾಜಿ ಗಣೇಶನ್ ರೀತಿ ರಾಜ್ಕುಮಾರ್ ಕೂಡಾ ನಡೆದಾಡುವ ಸಂಸ್ಥೆಯಿದ್ದಂತೆ ಎಂದು ಬಣ್ಣಿಸಿರುವ ಕಮಲ್, ತಾವು ಅಷ್ಟು ಎಮೂಷನಲ್ ಅಲ್ಲ, ಅದರಲ್ಲೂ ಅದನ್ನು ತೋರಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ತಮ್ಮ ಎಣಿಕೆ ರಾಜ್ ಅವರನ್ನು ಭೇಟಿ ಮಾಡಿದಾಗ ಸುಳ್ಳಾಯಿತು. ರಾಜ್ ಅವರು ತಮ್ಮನ್ನು ಅಲಂಗಿಸಿಕೊಂಡಾಗ ಪ್ರಯತ್ನಪಟ್ಟು ನಗಲು ಯತ್ನಿಸಿ ಸೋತೆ. ಆ ಕ್ಷಣ ಮೌನ ಆವರಿಸಿಕೊಂಡಿತ್ತು . ಆ ಕ್ಷಣದಲ್ಲಿ ರಾಜ್ ಅವರ ಕಣ್ಣಲ್ಲಿದ್ದ ನೀರು, ಇಷ್ಟೊಂದು ಜನ ಹಿತೈಷಿಗಳನ್ನು ಬಿಟ್ಟು ನಾನೆಲ್ಲಿಗೆ ಹೋಗಲಿ ಎಂದು ಹೇಳುವಂತಿದ್ದವು. ಆ ಕ್ಷಣವನ್ನು ತಾವೆಂದೂ ಮರೆಯಲು ಸಾಧ್ಯವಿಲ್ಲ ಎಂದು ವರನಟನ ಭೇಟಿ ಸಂದರ್ಭದಲ್ಲಿ ತಮಗಾದ ರೋಮಾಂಚನವನ್ನು ಕಮಲ್ ವರ್ಣಿಸಿದರು.
ಪದಗಳಿಗೆ ನಿಲುಕದ ಸಂತೋಷ : ನೋಡುಗರಿಗೆ ಆ ಕ್ಷಣ ತಮಾಷೆಯಾಗಿ ಕಾಣಬಹುದು. ನಾನು ಕೂಡ ನಟಿಸಬಲ್ಲೆ, ಕೃತಕವಾಗಿ ಕಣ್ಣೀರು ಸುರಿಸಬಲ್ಲೆ ಆದರೆ ಭೇಟಿಯ ಕ್ಷಣದಲ್ಲಿ ಉಂಟಾದ ಅನುಭವವನ್ನು ವರ್ಣಿಸಲು ಸಾಧ್ಯವಿಲ್ಲ. ಎದೆಯಾಳದಿಂದ ಬಂದಾಗ ಅದರ ಅನುಭವ ತುಂಬಾ ಭಿನ್ನ. ಇದು ಅರ್ಥವಾಗದಿದ್ದರೆ ವ್ಯಂಗ್ಯ ಚಿತ್ರಗಾರರು ಹಾಸ್ಯಸ್ಪದವಾಗಿ ಅಂತ ಸನ್ನಿವೇಶವೊಂದನ್ನು ಚಿತ್ರಿಸಬಹುದು ಆದ್ದರಿಂದ ಕೆಲವು ಭಾವನಾತ್ಮಕ ಘಳಿಗೆಗಳನ್ನು ಖಾಸಗಿಯಾಗೆ ಇಟ್ಟುಕೊಳ್ಳಬೇಕಾಗುತ್ತದೆ.
ಕಾಡಿನಲ್ಲಿನ ಎರಡು ತಿಂಗಳ ವನವಾಸದ ನಂತರ ತೀವ್ರವಾಗಿ ಬೇಸತ್ತಿದ್ದ ರಾಜ್, ತಮ್ಮನ್ನು ಕೊಲ್ಲುವಂತೆ ವೀರಪ್ಪನ್ಗೆ ಹೇಳುತ್ತಿದ್ದಾಗಿ ತಿಳಿಸಿದರು ಎಂದ ಕಮಲ್, ರಾಜ್ ಅವರು ಕಾಡಿನಲ್ಲಿದ್ದಾಗ ಹೇಳಿಕೆ ನೀಡಲು ತಾವು ಹಿಂಜರಿದ ಅಂಶಗಳ ಬಗ್ಗೆಯೂ ಮಾತನಾಡಿದರು.
ಕಡ್ಡಿಯ ಕತೆ : ವೀರಪ್ಪನ್ನ ಅಟ್ಟಹಾಸಕ್ಕೆ ತೆರೆ ಎಳೆಯುವುದು ಸುಲಭ ಆದರೆ ಆತ ಒಬ್ಬನೇ ಇಲ್ಲ. ಕಡ್ಡಿಯನ್ನು ಮುರಿಯುವುದು ಸುಲಭ ಆದರೆ ಅದೇ ಕಡ್ಡಿಗಳ ಹೊರೆಯನ್ನು ಮುರಿಯುವುದು ಕಷ್ಟ ಎಂಬ ಕತೆಯನ್ನು ಕಮಲ್ ಹೇಳಿದರು. ವೀರಪ್ಪನ್ ಒಂದು ಕಾಯಿಲೆ ಅಲ್ಲ, ಕೇವಲ ಕಾಯಿಲೆಯ ಲಕ್ಷಣ ಮಾತ್ರ. ಹಾಗೆ ನೋಡಿದರೆ ರಾಜ್ ಅಪಹರಣವನ್ನು ತಪ್ಪಿಸಬಹುದಾಗಿತ್ತು. ಕಾರ್ಯಾಚರಣೆ ಸಂದರ್ಭದಲ್ಲಿ ಸೈನಿಕನೊಬ್ಬ ಆಫ್ಟರ್ ಶೇವ್ ತೆಗೆದುಕೊಂಡು ಹೋಗುತ್ತಿದ್ದುದರ ಬಗ್ಗೆ ವರದಿಯಾಗಿತ್ತು. ಇದು ಮೈಲಿಗಳ ದೂರಕ್ಕೆ ವಾಸನೆ ಹರಡಬಲ್ಲದು ಇಂತವರು ಕಾಡಿನಲ್ಲಿ ಹೇಗೆ ವಾಸಿಸುತ್ತಾರೆ ಹೇಗೆ ಕಾರ್ಯಾಚರಣೆ ಮಾಡುತ್ತಾರೆ ಎಂದು ಕಮಲ್ ಪ್ರಶ್ನಿಸಿದರು.
ದೆಹಲಿ ದೇಶದ ರಾಜಧಾನಿ, ದೆಹಲಿಯ ಹೊರವಲಯದಲ್ಲಿರುವ ಗರಿkುಯಾಬಾದ್ ಅಪರಾಧಗಳ ರಾಜಧಾನಿಯಾಗುತ್ತಿದೆ ಹಾಗೆ ವೀರಪ್ಪನ್ ಕತೆ ಕೂಡಾ ಎಂದರು. ರಾಮ್ ಗೋಪಾಲ್ ವರ್ಮರ ಜಂಗಲ್ ಚಿತ್ರಕ್ಕೂ ಅಪಹರಣಕ್ಕೂ ಸಂಬಂಧ ಇದೆ ಎಂಬ ಆರೋಪಕ್ಕೆ ಉತ್ತರಿಸಿದ ಕಮಲ್, ವೀರಪ್ಪನ್ ಕೇವಲ ತಮಿಳು ಭಾಷೆಯ ಚಿತ್ರಗಳನ್ನಷ್ಟೇ ನೋಡುತ್ತಾನೆ. ನಾನು ರಾಜ್ ಅವರನ್ನು ಭೇಟಿ ಮಾಡಿದಾಗ ನನ್ನ ಚಿತ್ರಗಳನ್ನು ವೀರಪ್ಪನ್ ತುಂಬಾ ಇಷ್ಟ ಪಡುತ್ತಾನೆ ಎಂದು ರಾಜ್ ಹೇಳಿದರು. ಆಗ ನನಗೆ ತುಂಬಾ ಮುಜುಗರವಾಯಿತು ಏಕೆಂದರೆ ಅದು ತುಂಬಾ ಅವಾಸ್ತವ. ಇದು ಮಾರ್ಕ್ವಜ್ ನ್ಯೂಸ್ ಆಫ್ ಕಿಡ್ನಾಪಿಂಗ್ನ ಕತೆಯಂತಿದೆ. ಆಗ ನನಗನ್ನಿಸಿದ್ದು , ರಾಜ್ ಅವರ ಅಪಹರಣ ನಿಜವಾಗಿ ಆಗಿತ್ತಾ ? ಎಂದು ಕಮಲ್ ಹೇಳಿದರು. ನನ್ನ ಅಭಯ್ ಚಿತ್ರ ಸರಣಿ ಕೊಲೆಗಾರನ ಬಗ್ಗೆ ಇದ್ದರೂ ಇನ್ನು ಮುಂದೆ ಕ್ರೆೃಮ್ ಮತ್ತು ಹಿಂಸಾತ್ಮಕ ಚಿತ್ರಗಳನ್ನು ಮಾಡಬಾರದೆಂದು ತೀರ್ಮಾನಿಸಿದ್ದೇನೆ ಎಂದರು.