ಸತ್ಯಮಂಗಲ ಕಾಡಿನಲ್ಲಿ ಜಂಟಿ ಕಾರ್ಯಾಚರಣೆ ಪಡೆ
ಕೊಯಮತ್ತೂರು : ಎಚ್. ಟಿ. ಸಾಂಗ್ಲಿಯಾನ ನೇತೃತ್ವದ ಕರ್ನಾಟಕದ ವಿಶೇಷ ಕಾರ್ಯಾಚರಣೆ ಪಡೆ ಮತ್ತು ಬಾಲಚಂದ್ರನ್ ನೇತೃತ್ವದ ತಮಿಳುನಾಡಿನ ವಿಶೇಷ ಕಾರ್ಯಾಚರಣೆ ಪಡೆಗಳು ಸತ್ಯಮಂಗಲ ಕಾಡನಲ್ಲಿ ಕಾರ್ಯಾಚರಣೆಗೆ ಸಿದ್ಧತೆ ನಡೆಸಿವೆ.
ಜಂಟಿ ಕಾರ್ಯಾಚರಣೆ ಪಡೆಯನ್ನು ಏಳು ಗುಂಪುಗಳಾಗಿ ವಿಭಾಗಿಸಲಾಗಿದ್ದು, ತಮಿಳುನಾಡು ಕಾರ್ಯಾಚರಣೆ ಪಡೆಗೆ ನಾಲ್ಕು ಹೊಸ ಎಸ್ಪಿಗಳು ಸೇರ್ಪಡೆಯಾಗಿದ್ದಾರೆ. ಈ ಹಿಂದೆ ವೀರಪ್ಪನ್ ವಿರುದ್ಧ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಕೈ ಬೆರಳುಗಳನ್ನು ಕಳೆದುಕೊಂಡಿರುವ ತಮಿಳ್ ಸೆಲ್ವನ್, ಶೈಲೇಂದ್ರಬಾಬು, ಪೆರಿಯ ಅಯ್ಯ, ಅಶೋಕ್ ಕುಮಾರ್ ದಾಸ್ ಕಾರ್ಯಾಚರಣೆ ಪಡೆಯಲ್ಲಿ ಸೇರ್ಪಡೆಯಾಗಿರುವ ಹೊಸ ಮುಖಗಳಾಗಿದ್ದು, ಈ ನಾಲ್ಪರು ಹಿರಿಯ ಅಧಿಕಾರಿಗಳಿಗೂ ವೀರಪ್ಪನ್ ಜೋತೆ ಸೆಣಸಾಡಿದ ಅನುಭವವಿದೆ.
ಕೆಂಪನ್ ಬಂಧನ : ಈ ಹಿಂದೆ ಗೋಪಿಚೆಟ್ಟಿಪಾಳ್ಯಂನಲ್ಲಿ 1989ರಿಂದ 91ರವರೆಗೆ ಎಸಿಪಿಯಾಗಿ ಕಾರ್ಯ ನಿರ್ವಹಿಸಿದ್ದ ಶೈಲೇಂದ್ರಬಾಬು ಅವರು ಈಗ ಚೆನ್ನೈನ ಡಿಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಬಾರಿ ವೀರಪ್ಪನ್ ಅನ್ನು ಹಿಡಿದುಕೊಂಡೇ ನಾಡಿಗೆ ಬರುವುದಾಗಿ ಸಂದರ್ಶನವೊಂದರಲ್ಲಿ ವಿಶ್ವಾಸ ವ್ಯಕ್ತಪಡಿಸಿರುವ ಶೈಲೇಂದ್ರಬಾಬು, ಈ ಹಿಂದೆ ನಾಲ್ಕು ಬಾರಿ ವೀರಪ್ಪನ್ ಜೊತೆ ಮುಖಾಮುಖಿ ಸೆಣಸಾಡಿದ್ದಾರೆ. ಇಬ್ಬರು ಬಂಟರನ್ನು ಕೊಂದಿದ್ದಾರೆ. ಕೆಂಪನ್ ಎಂಬ ಇನ್ನೊಬ್ಬ ವೀರಪ್ಪನ್ ಸಹಚರ ಸೇರಿದಂತೆ 20 ಜನರನ್ನು ಬಂಧಿಸಿದ್ದಾರೆ.
ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾರ್ಯಾಚರಣೆ ಪಡೆಯಲ್ಲಿ ಇದ್ದ ತಮಿಳ್ ಸೆಲ್ವನ್ ಸಹ ತಮ್ಮ ಈಗಿನ ಕಾರ್ಯಾಚರಣೆ ಯಶಸ್ವಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಗತ್ಯಕ್ಕನುಗುಣವಾಗಿ ಇನ್ನೂ ಹೆಚ್ಚಿನ ಗುಂಪುಗಳನ್ನು ರಚಿಸುವ ಸಾಧ್ಯತೆ ಇದ್ದು, ಹೊಸಬರು ಮತ್ತು ಯುವಕರಿಗೆ ಆಧ್ಯತೆ ನೀಡಲು ಉದ್ದೇಶಿಸಲಾಗಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ