ಗೆದ್ದ ಮಮತಾ : ಸೀಮೆಎಣ್ಣೆ, ಅಡುಗೆ ಅನಿಲ ಬೆಲೆ ತುಸು ಇಳಿಕೆ
ನವದೆಹಲಿ : ತೃಣಮೂಲ ಕಾಂಗ್ರೆಸ್ನ ನಾಯಕಿ ಮಮತಾ ಬ್ಯಾನರ್ಜಿ ಅವರ ರಾಜಿನಾಮೆ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಚಳಿಗಾಲದ ಸಂಸತ್ ಅಧಿವೇಶನ ಪ್ರಾರಂಭವಾಗುವ ಮುನ್ನಾದಿನ ಅಡುಗೆ ಅನಿಲ ಮತ್ತು ಸೀಮೆ ಎಣ್ಣೆ ಬೆಲೆಗಳನ್ನು ಭಾಗಶಃ ಇಳಿಸಿದೆ.
ಸೀಮೆಎಣ್ಣೆ ಬೆಲೆಯನ್ನು ಲೀಟರ್ಗೆ ಒಂದು ರುಪಾಯಿಯಂತೆ ಹಾಗೂ ಅಡುಗೆ ಅನಿಲ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 10 ರುಪಾಯಿಯಂತೆ ಇಳಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆದರೆ, ಇಳಿಕೆಯ ಹೊಸ ಬೆಲೆಗಳು ಎಂದಿನಿಂದ ಜಾರಿಗೆ ಬರುತ್ತವೆ ಎನ್ನುವುದನ್ನು ಅವರು ತಿಳಿಸಲಿಲ್ಲ .
ಸೋಮವಾರದಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಭಾನುವಾರ ನಡೆದ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಭೆಯಲ್ಲಿ ಪ್ರಧಾನಿ ವಾಜಪೇಯಿ ಅವರು ಬೆಲೆ ಇಳಿಕೆಯ ನಿರ್ಧಾರವನ್ನು ಪ್ರಕಟಿಸಿದರು ಎಂದು ಫರ್ನಾಂಡಿಸ್ ಹೇಳಿದರು. ಬೆಲೆ ಇಳಿಕೆ ಕುರಿತ ಹೇಳಿಕೆಯನ್ನು ಇಂಧನ ಖಾತೆ ಸಚಿವ ರಾಮ್ ನಾಯ್ಕ್ ಅವರು ಮಂಗಳವಾರ ಸದನದಲ್ಲಿ ನೀಡಲಿದ್ದಾರೆ.
ಹೋರಾಟಕ್ಕೆ ಸಂದ ಜಯ : ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಬೆಲೆಗಳ ಇಳಿಕೆಯ ಕೇಂದ್ರ ಸರ್ಕಾರದ ನಿರ್ಧಾರವನ್ನು ಜನ ಸಾಮಾನ್ಯರ ಹಿತಕ್ಕಾಗಿ ಮಮತಾ ಬ್ಯಾನರ್ಜಿ ನಡೆಸಿದ ಹೋರಾಟಕ್ಕೆ ಸಂದ ಜಯ ಎಂದು ತೃಣಮೂಲ ಕಾಂಗ್ರೆಸ್ಸಿನ ಹಿರಿಯ ನಾಯಕ ಸುಬ್ರತೊ ಮುಖರ್ಜಿ ಬಣ್ಣಿಸಿದ್ದಾರೆ. ಆದರೆ, ಭಾಗಶಃ ಬೆಲೆ ಇಳಿಕೆಯ ಕ್ರಮವನ್ನು, ಕೇಂದ್ರ ಸರ್ಕಾರ ಜನತೆಗೆ ಮಾಡಿದ ಮೋಸ ಎಂದು ಸಿಪಿಎಂ ಪಕ್ಷದ ಪಶ್ಚಿಮ ಬಂಗಾಳದ ರಾಜ್ಯ ಘಟಕ ಟೀಕಿಸಿದೆ.
ಅಡುಗೆ ಅನಿಲ ಮತ್ತು ಸೀಮೆ ಎಣ್ಣೆ ಬೆಲೆ ಇಳಿಕೆಯಿಂದಾಗಿ ದೇಶದ ತೈಲ ನಿಧಿ ಕೊರತೆಗೆ ಪ್ರತಿ ತಿಂಗಳೂ 139 ಕೋಟಿ ರುಪಾಯಿಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...