ದ್ರಾವಿಡಿಯನ್ ವಿವಿಯಿಂದ ಫೆಬ್ರವರಿಯಲ್ಲಿ ದ್ರಾವಿಡಸಾಂಸ್ಕೃತಿಕ ಮಹೋತ್ಸವ
ತಿರುಪತಿ : ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾಲಯವು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೆರಿಗಳ ಸಹಯೋಗದೊಂದಿಗೆ 2001, ಫೆಬ್ರವರಿ 8 ರಿಂದ 4 ದಿನಗಳ ದ್ರಾವಿಡ ಸಾಂಸ್ಕೃತಿಕ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ಉತ್ಸವದ ಆತಿಥ್ಯವನ್ನು ಅತಿಥೇಯ ರಾಜ್ಯ ಆಂಧ್ರಪ್ರದೇಶ ವಹಿಸುವುದು.
ನಾಲ್ಕು ದಿನಗಳ ಉತ್ಸವವನ್ನು ವಿಶ್ವ ವಿದ್ಯಾಲಯ, ಸಂಸ್ಕೃತಿ ಇಲಾಖೆ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಜಂಟಿಯಾಗಿ ಏರ್ಪಡಿಸಿವೆ ಎಂದು ವಿವಿಯ ಉಪಕುಲಪತಿ ಪ್ರೊ. ಪಿ.ವಿ. ಅರುಣಾಚಲಂ ತಿಳಿಸಿದ್ದಾರೆ. ಅವರು ಭಾನುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳ ರಾಜ್ಯಪಾಲರು ಸೇರಿದಂತೆ ದೇಶದ ವಿವಿಧ ಭಾಗಗಳ ಸುಮಾರು 500 ಆಹ್ವಾನಿತರು ಭಾಗವಹಿಸುವ ಉತ್ಸವವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉದ್ಘಾಟಿಸುವರು.
ಕನ್ನಡ ದಿನದಲ್ಲಿ ಬಸವಣ್ಣ : ಉತ್ಸವದಲ್ಲಿ ಕನ್ನಡ ದಿನ, ತಮಿಳು ದಿನ, ಮಲಯಾಳಂ ದಿನ ಹಾಗೂ ತೆಲುಗು ದಿನ ಎನ್ನುವ 4 ಅಧಿವೇಶನಗಳನ್ನು ಏರ್ಪಡಿಸಲಾಗಿದೆ. ಕನ್ನಡ ದಿನದಂದು ಹನ್ನೆರಡನೆಯ ಶತಮಾನದ ಶರಣ ಬಸವಣ್ಣನ ಬದುಕು, ಸಾಧನೆಗಳ ಕುರಿತು ಚರ್ಚಿಸಲಾಗುವುದು. ಅದೇರೀತಿ, ತಮಿಳು ದಿನದಂದು ಸಂತ ಕವಿ ತಿರುವಳ್ಳುವರ್ ಬಗ್ಗೆ ಚರ್ಚೆಯಾದರೆ, ಮಲಯಾಳಂ ದಿನದಂದು ನಾರಾಯಣ ಗುರು ಹಾಗೂ ತೆಲುಗು ದಿನದಂದು ಸಂತ ಕವಿ ವೇಮನ ಅವರ ಕುರಿತು ಚರ್ಚೆಗಳು ನಡೆಯಲಿವೆ.
ಇದೇ ಸಂದರ್ಭದಲ್ಲಿ ಬಸವೇಶ್ವರ ಮತ್ತು ತಿರುವಳ್ಳುವರ್ ಅವರ ಕುರಿತ ಕೃತಿ ಸಂಪುಟಗಳನ್ನು ವಿಶ್ವ ವಿದ್ಯಾಲಯ ಬಿಡುಗಡೆ ಮಾಡುವುದು. ಕೃತಿ ಸಂಪುಟಗಳನ್ನು ಬಸವ ಸಮಿತಿ ಮತ್ತು ಮದರಾಸು ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಪ್ರಕಟಿಸಲಾಗುತ್ತಿದೆ.
ಭಾಷಾಶಾಸ್ತ್ರ ಕ್ಕೆ ಸಂಬಂಧ ಪಟ್ಟ ಅಧ್ಯಯನ ಮಾತ್ರವಲ್ಲದೇ, ಕಂಪ್ಯೂಟರ್ ವಿಜ್ಞಾನ, ಗಣಿತ ಮತ್ತು ಸಂಖ್ಯಾಶಾಸ್ತ್ರ ವಿಷಯಗಳ ಪದವಿ ಕೋರ್ಸ್ಗಳನ್ನು ವಿಶ್ವ ವಿದ್ಯಾಲಯ 1997 ರಲ್ಲಿ ಪ್ರಾರಂಭಿಸಿದೆ. ಇತ್ತೀಚೆಗೆ ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ಪಿಎಚ್.ಡಿ ಮತ್ತು ಎಂ.ಫಿಲ್ ಕೋರ್ಸ್ಗಳನ್ನು ಪರಿಚಯಿಸಿದೆ. ತಿರುಮಲ- ತಿರುಪತಿ ದೇವಸ್ಥಾನವು ಪ್ರತಿ ವರ್ಷ 15 ಲಕ್ಷ ರುಪಾಯಿಗಳ ಅನುದಾನವನ್ನು ದ್ರಾವಿಡಿಯನ್ ವಿಶ್ವ ವಿದ್ಯಾಲಯಕ್ಕೆ ನೀಡುತ್ತಿದೆ.
(ಯುಎನ್ಐ)