ಆಂಗ್ಲ ಸಾಹಿತ್ಯ ಪ್ರಿಯ, ಭಾಷಾತೀತ ನಾದ ಸಂಶೋಧಕ
ರಾಮನ್ ತಮ್ಮ ಮುಂದಿನ ಬದುಕನ್ನೆಲ್ಲಾ ಕಳೆದದ್ದು, ಈ ಇನ್ಸ್ಟಿಟ್ಯೂಟ್ನಲ್ಲಿಯೇ. ಕೇವಲ ವಿಜ್ಞಾನವಷ್ಟೇ ಅಲ್ಲ. ಇಂಗ್ಲಿಷ್ ಸಾಹಿತ್ಯ ಪ್ರಿಯರೂ ಆಗಿದ್ದ ರಾಮನ್ ಭಾರತದ ಇತಿಹಾಸ, ವೇದಾಂತ ಪುರಾಣಗಳ ಮೇಲೂ ಅಪಾರ ಪಾಂಡಿತ್ಯ ಹೊಂದಿದ್ದರು. ಅಷ್ಟೇ ಅಲ್ಲ ರಾಮನ್ ವಾದ್ಯಗಾರರೂ ಆಗಿದ್ದರು ಎಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ.
18 ವರ್ಷದ ಯುವಕರಾಗಿದ್ದಾಗ ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳು ಇವರನ್ನು ಕಾಡಿತು. ಬಿಲ್ಲಿನಾಕಾರದ ಸಾಧನದಿಂದ ತಂತಿಯ ಮೇಲೆ ಉಜ್ಜಿ ನಿನಾದ ಮೂಡಿಸುವ ಪಿಟೀಲಿನಂತಹ ವಾದ್ಯಗಳ ಅಭ್ಯಾಸಕ್ಕೆ ಇದು ಪ್ರೇರೇಪಿಸಿತು. ಕಮಾನನ್ನು ತಂತಿಯ ಮೇಲೆ ಓಡಿಸಿದಾಗ ವಾದ್ಯದ ಬುರುಡೆಗೆ ಅನುವಾದ ಧ್ವನಿ ಹೇಗೆ ಮೂಡುತ್ತದೆ ಎಂಬುದನ್ನು ವಿಶ್ಲೇಷಿಸಿದರು. ಮೃದಂಗ ತಬಲ ಅಭ್ಯಾಸ ಮಾಡಿದರು. ಅವೆರಡೂ ವೈಜ್ಞಾನಿಕವಾಗಿ ತಂತಿ ವಾದ್ಯಗಳಿಗಿಂತಲೂ ಹೇಗೆ ಭಿನ್ನ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಪ್ರಚುರಪಡಿಸಿದರು.
ದುಂಡನೆಯ ಚರ್ಮದ ಪೊರೆ ಅದುರುವಾಗ ಸರಳ ಆವರ್ತ ಚಲನೆ ಹೊದಿರುವುದಿಲ್ಲ ಎಂಬ ಭಾವನೆ ತಪ್ಪು ಎಂದು ಪ್ರತಿಪಾದಿಸಿದ ರಾಮನ್ ಮೃದಂಗ, ತಬಲಗಳ ಸರಳ ಆವರ್ತ ಅಧಿಸ್ವರಗಳನ್ನೇ ಹೊರ ಹೊಮ್ಮಿಸುತ್ತವೆ ಎಂದು ಸಾರಿದರು. ಸ್ವಯಂ ಅವಲೋಕನ, ವಿಶ್ಲೇಷಣೆಯ ಮೇಲೆ ರಾಮನ್ರಿಗೆ ಸಂಪೂರ್ಣ ವಿಶ್ವಾಸ. ತಾವೇ ಸ್ವತಃ ಅನುಭವಿಸಿ, ವಿಚಾರಿಸಿ, ವಿಮರ್ಶಿಸಿ ತೀರ್ಮಾನಕ್ಕೆ ಬರಬೇಕು, ಇನ್ನೊಬ್ಬರು ಹೇಳಿದ್ದನ್ನು ಕೇಳಿ ಅದೇ ನಿಜ ಎಂದು ನಂಬುವುದು ತಪ್ಪು ಎಂದು ಸದಾ ವಾದಿಸುತ್ತಿದ್ದರು.
ಹೊಸ ಸಂಶೋಧನೆಗಳು ಪ್ರಕೃತಿಯ ತೀಕ್ಷ್ಣ ಅವಲೋಕನದಿಂದ ದೊರಕುತ್ತದೆಯೇ ವಿನಾ ಕೇವಲ ಪುಸ್ತಕ ಓದಿನಿಂದಲ್ಲ ಎಂದು ರಾಮನ್ ಹೇಳುತ್ತಿದ್ದರು.
ರಾಮನ್ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಮನ್ನಿಸಿ ಭೌತ ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮೆರೆದವರಿಗೆ ಲಂಡನ್ ರಾಯಲ್ ಸೊಸೈಟಿ ನೀಡುತ್ತಿದ್ದ ಹಗ್ಸ್ ಪದಕ ದೊರಕಿತು. ಇಟಾಲಿಯನ್ ಸೊಸೈಟಿ ಆಫ್ ಸೈನ್ಸ್ಸ್ ಮೆಟಿರಿ ಮೆಡಲ್ ನೀಡಿತು. ಈ ಪ್ರಶಸ್ತಿ ಪಡೆದ ಮೊದಲ ಏಷ್ಯನ್ ರಾಮನ್.
1920ನೇ ಡಿಸೆಂಬರ್ 10ನೇ ತಾರೀಖು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಅಂದು ಭಾರತ ಮಾತೆಯ ಈ ಕುಲಪುತ್ರ ವಿಜ್ಞಾನ ವಿಶ್ವದಲ್ಲಿ ಪ್ರಜ್ವಲಿಸಿದ ಧ್ರುವತಾರೆಯಾಗಿ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾದರು. ಮೈಸೂರು ಸಂಸ್ಥಾನದ ಶ್ರೀಮನ್ಮಹಾರಾಜರು ರಾಮನ್ಗೆ ರಾಜ ಭೂಷಣ ಎಂದು ಬಿರುದು ನೀಡಿ ಗೌರವಿಸಿದರು.
ಪ್ರಥಮ ಲೇಖನ : ಎಂ.ಎ. ಓದುತ್ತಿದ್ದಾಗ ರಾಮನ್ ಸ್ಪೆಕ್ಟ್ರೋ ಮೀಟರ್ನಲ್ಲಿ ಪ್ರಯೋಗ ನಿರತರಾಗಿದ್ದಾಗ ಕಂಡ ಕೆಲವು ವಿಚಿತ್ರಗಳ ಬಗ್ಗೆ ಒಂದು ಲೇಖನ ಬರೆದರು. ಅದು ಥಿಯಾಸಾಫಿಕಲ್ ಮ್ಯಾಗಜೀನ್ನಲ್ಲಿ ಪ್ರಕಟವಾಯಿತು. ಇವೇ ಅವರ ಪ್ರಪ್ರಥಮ ವೈಜ್ಞಾನಿಕ ಲೇಖನ. ಆ ನಂತರದ ದಿನಗಳಲ್ಲಿ ಅವರು ಬರೆದಿರುವ ನೂರಾರು ಲೇಖನಗಳು ಇಂದಿನ ವಿಜ್ಞಾನಿಗಳಿಗೆ ಆಕರ ಗ್ರಂಥವಾಗಿದೆ.
ಮೈಸೂರು ಪೇಟ ತೊಟ್ಟು, ಗಂಭೀರ ನಿಲುವಿನಿಂದ ನಿರರ್ಗಳವಾಗಿ ಮಾತನಾಡುತ್ತಿದ್ದ ರಾಮನ್ ದೇಶ ವಿದೇಶಗಳನ್ನೆಲ್ಲಾ ಸುತ್ತಿ ಭಾರತದ ಪ್ರತಿಭೆಯ ಪರಿಚಯ ಮಾಡಿಸಿದರು. 1921ರಲ್ಲಿ ಬ್ರಿಟಿಷ್ ಸಾಮ್ರಾಜ್ಯಗಳ ವಿಶ್ವ ವಿದ್ಯಾಲಯಗಳ ಕಾಂಗ್ರೆಸ್ನಲ್ಲೂ ಪಾಲ್ಗೊಂಡಿದ್ದರು.
ರಾಮನ್ ಎಫೆಕ್ಟ್ ಸಂಶೋಧನೆಗೆ ಸ್ಫೂರ್ತಿ : ರಾಮನ್ ಯುರೋಪ್ ರಾಷ್ಟ್ರ ಪ್ರವಾಸ ಕೈಗೊಂಡಾಗ, ಅಲ್ಲಿ ಸಾಮಾನ್ಯವಾಗಿ ಕಾಣಬರುತ್ತಿದ್ದ ಹಿಮ ರಾಶಿಯ ಬಣ್ಣ ನೀಲಿ ಮತ್ತು ಹಸಿರಿನಂತೆ ತೋರುತ್ತಿತ್ತು. ಆದರೆ, ಒಂದು ಹಿಡಿ ಹಿಮವನ್ನು ತೆಗೆದುಕೊಂಡು ಅವಲೋಕಿಸಿದಾಗ ಅದು ಪಾರದರ್ಶಕವಾಗಿ ತೋರುತ್ತಿತ್ತು. ಇದು ಸಮುದ್ರದ ನೀರಿಗೂ ಅನ್ವಯಿಸುತ್ತದೆ. ಇದು ರಾಮನ್ರ ಕುತೂಹಲ ಕೆರಳಿಸಿತು. ಈ ಬಗ್ಗೆ ಸತತವಾಗಿ 7 ವರ್ಷಗಳ ಕಾಲ ಸಂಶೋಧನೆ ನಡೆಸಿದ ರಾಮನ್ ವಿಶ್ವ ವಿಖ್ಯಾತ ವಿಜ್ಞಾನಿ ಎಂಬ ಕೀರ್ತಿಗೆ ಪಾತ್ರರಾದರು.