ಆರೋಗ್ಯ ತಪಾಸಣೆಗಾಗಿ ರಾಜ್ ಮಲ್ಯ ಆಸ್ಪತ್ರೆಗೆ ದಾಖಲು
ಬೆಂಗಳೂರು: ಮೂರುವರೆ ತಿಂಗಳ ವನವಾಸ, ಅಣ್ಣಾವ್ರ ದೈಹಿಕ ಸ್ಥಿತಿಯ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು , ವಿಶೇಷ ತಪಾಸಣೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಯಾಂದಕ್ಕೆ ಸೇರಿಸಲಾಗಿದೆ ಎಂದು ರಾಜ್ ಅವರ ಕುಟುಂಬ ವೈದ್ಯ ಡಾ. ರಮಣ ರಾವ್ ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ ರಾಜ್ಕುಮಾರ್ ಅವರನ್ನು ಮಲ್ಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಎರಡು ದಿನಗಳ ಕಾಲ ಅವರನ್ನು ತಜ್ಞ ವೈದ್ಯರು ವಿಶೇಷ ತಪಾಸಣೆಗೆ ಒಳಪಡಿಸುವರು ಎಂದು ರಮಣ ರಾವ್ ಹೇಳಿದ್ದಾರೆ. ಕಾಡಿನಲ್ಲಿ ಕ್ರಿಮಿ ಕೀಟಗಳು, ಸೊಳ್ಳೆ ಕಡಿತದಿಂದಾಗಿ ಉಂಟಾಗಿರುವ ಗಾಯಗಳಿಗೆ ರಮಣ ರಾವ್ ಅವರೇ ಪ್ರಥಮ ಚಿಕಿತ್ಸೆ ನೀಡಿದ್ದರು. ನಂತರ ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಕಣ್ಣಿನ ತಪಾಸಣೆ ಮುಗಿದಿದ್ದು, ಅವರ ದೃಷ್ಟಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ತಪಾಸಣೆ ಮಲ್ಯ ಆಸ್ಪತ್ರೆಯಲ್ಲಿ ನಡೆಯಲಿದೆ.
73ರಲ್ಲೂ ಗಟ್ಟಿ ಮುಟ್ಟಾಗಿರುವ ರಾಜ್ : ವೀರಪ್ಪನ್ಒತ್ತೆಯಿಂದ ತಪ್ಪಿಸಿಕೊಂಡು ಬಂದಿದ್ದ ನಾಗಪ್ಪ ವೈದ್ಯಕೀಯ ಉಪಚಾರ ಪಡೆದ ನಂತರವಷ್ಟೇ ಇತರರೊಂದಿಗೆ ಮಾತನಾಡುವುದು ಸಾಧ್ಯವಾಗಿತ್ತು. ಅನಾರೋಗ್ಯದ ಕಾರಣದಿಂದಲೇ ವೀರಪ್ಪನ್ ಸೆರೆಯಿಂದ ಪಾರಾಗಿ ಬಂದಿದ್ದ ಗೋವಿಂದರಾಜು ಆಸ್ಪತ್ರೆಯಲ್ಲಿ ಸ್ವಲ್ಪ ಕಾಲ ಚಿಕಿತ್ಸೆ ಪಡೆದಿದ್ದರು. ಇವರಿಬ್ಬರಿಗೂ ಹೋಲಿಸಿದಲ್ಲಿ 73 ರ ವಯಸ್ಸಿನ ರಾಜ್ ಕುಮಾರ್ ಅವರು ಯೋಗ ಶಕ್ತಿಯಿಂದ ತಮ್ಮ ಆರೋಗ್ಯವನ್ನು ಚೆನ್ನಾಗಿಯೇ ಕಾಪಾಡಿಕೊಂಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ರಾಜ್ ಬಿಡುಗಡೆ