ಮನೆ ಮನೆಗೇ ಬಂದು ಕನ್ನಡ ಪುಸ್ತಕ ಮಾರುವ ಹೊಸ ಕಾರ್ಯಕ್ರಮ
ಬೆಂಗಳೂರು : ನೀವು ಪುಸ್ತಕ ಪ್ರಿಯರೇ? ನಿಮಗೆ ಉತ್ತಮ ಕನ್ನಡ ಪುಸ್ತಕಗಳ ಕೊಳ್ಳುವ ಹಾಗೂ ಓದುವ ಆಸೆಯಿದೆಯೇ... ಹಾಗಾದರೆ ನಿಮಗಿದೋ ಸಂತಸದ ಸುದ್ದಿ... ಬೆಂಗಳೂರಿನ ಐದು ಬಡಾವಣೆಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನ.14ರಿಂದ 20ರವರೆಗೆ ಕನ್ನಡ ಪುಸ್ತಕ ಸಪ್ತಾಹ ಏರ್ಪಡಿಸಿದೆ.
ಹೇಳಿ ಕೇಳಿ ನವೆಂಬರ್ ಕನ್ನಡಿಗರ ತಿಂಗಳು, ಕನ್ನಡ ರಾಜ್ಯೋತ್ಸವದ ತಿಂಗಳು ಈ ತಿಂಗಳು ಎಚ್ಚೆತ್ತಿರುವ ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡಮಿ, ಸಂಗೀತ ಮತ್ತು ನೃತ್ಯ ಅಕಾಡಮಿಗಳು ಪ್ರಕಟಿಸಿರುವ ಪುಸ್ತಕಗಳ ಪ್ರದರ್ಶನ ಹಾಗೂ ಶೇ. 25ರ ದರದ ರಿಯಾಯಿತಿಯ ಮಾರಾಟದ ವ್ಯವಸ್ಥೆಯನ್ನೂ ಮಾಡಿದೆ.
ಈ ಪುಸ್ತಕ ಸಪ್ತಾಹದಲ್ಲಿ ಮೇಲ್ಕಂಡ ಸಂಸ್ಥೆಗಳು ಪ್ರಕಟಿಸಿರುವ ಕತೆ, ಕಾದಂಬರಿ, ಕವಿತೆ, ವಿಮರ್ಶೆ, ಸಮಾಜ, ವಿಜ್ಞಾನ, ಮಕ್ಕಳ ಸಾಹಿತ್ಯ, ಸಂಶೋಧನಾ ಕೃತಿಗಳು ಲಭ್ಯ. ಈ ವಿಷಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಚ್. ಜೆ. ಲಕ್ಕಪ್ಪ ಗೌಡ ತಿಳಿಸಿದ್ದಾರೆ.
ನ.14ರಂದು ಬೆಳಗ್ಗೆ 10 ಗಂಟೆಗೆ ಚಾಮರಾಜಪೇಟೆಯ ಮಕ್ಕಳ ಕೂಟದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಈ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. 15ರಂದು ಜಯನಗರ 2ನೇ ಬ್ಲಾಕ್ ಸಮಾಜ ಸೇವಾ ಸಂಘ, 16ರಂದು ಮಲ್ಲೇಶ್ವರ 8ನೇ ಕ್ರಾಸ್ನಲ್ಲಿರುವ ಗಾಂಧಿ ಸಾಹಿತ್ಯ ಸಂಘ, 17ರಂದು ವಿಜಯನಗರ ಉದಯ ಶಿಕ್ಷಣ ಸಂಸ್ಥೆ, 18ರಂದು ಪಿ.ಇ.ಎಸ್ ಕಾಲೇಜ್ನಲ್ಲಿ ಸಪ್ತಾಹ ನಡೆಯಲಿದೆ.
ಮನೆ ಮನೆಗೇ ಹೋಗಿ ಪುಸ್ತಕ ಮಾರಾಟ : ಹತ್ತು ಹತ್ತು ಮಂದಿ ಸ್ವಯಂ ಸೇವಕರನ್ನು ಉಳ್ಳ 10 ತಂಡಗಳು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಿಂದ ಚಾಮರಾಜಪೇಟೆಯ ಮುಖ್ಯರಸ್ತೆಗಳಲ್ಲಿರುವ ಮನೆಮನೆಗೆ ಹೋಗಿ ಕನ್ನಡ ಪುಸ್ತಕ ಮಾರಾಟ ಮಾಡುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ. 20ರಂದು ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಸಮಾರೋಪ ನಡೆಯಲಿದೆ. ಸಚಿವೆ ರಾಣಿ ಸತೀಶ್ ಕಾರ್ಯಕ್ರಮದ ಮುಖ್ಯ ಅತಿಥಿ.