ನೆರಳಂತೆ ಜೊತೆಗೂಡುವ ಬಟ್ಟಲು ಚಂದ್ರ
ತುಳಸೀ ಪೂಜೆಯ ಪಟಾಕಿ ಸದ್ದಿನ ನಡುವೆ ಮಳೆ ಮೂಗು ತೂರಿಸಲಿಲ್ಲ. ಬೆಂಗಳೂರು ಬರೀ ಕೆಟ್ಟದು ಎಂದು ಸಂಜೆ ಬಯ್ಯುತ್ತಲೇ ಮನೆಗೆ ಹೋಗಿ ಸ್ವಲ್ಪ ರಿಲ್ಯಾಕ್ಸ್ ಆಗಿ, ಮತ್ತೆ ಬೇಲ್ ಪುರಿಯಾದರೂ ತಿನ್ನೋಣ ಅಂತ ಜಯನಗರದ ಫೂಟ್ ಪಾತ್ನಲ್ಲಿ ನಡೆಯುತ್ತಿದ್ದರೆ, ಬಟ್ಟಲು ಚಂದ್ರ ಪಕ್ಕದಲ್ಲಿಯೇ ತೇಲಿ ಬರುತ್ತಾನೆ. ಅದೇ ದೇವದಾರು ಮರಗಳ ಕೊಂಬೆಯೆಡೆಯಲ್ಲಿ ತೂರಿಕೊಂಡು. ಆಕಾಶ ದಿನಕಳೆದಂತೆ ಹತ್ತಿರವಾಗುತ್ತಿದೆ. ಚುಕ್ಕಿ ರಾಶಿಗಳ ತುಂಬಿಕೊಂಡೇ.
ಬೆಳಿಗ್ಗೆ ಇನ್ನೊಂದು ಸಂದಿಗ್ಧ ! ಕೊರೆಯುವ ಚಳಿಗೆ ಹೊದ್ದು ಹೊದ್ದು ಮಲಗುವ ಬೆಟ್ಟದಾಸೆ. ಆಫೀಸಿಗೆ ಹೊರಡಬೇಕು ಲೇಟಾಗುತ್ತದೆ ಎನ್ನುವ ಅವಸರ. ಚಳಿಯ ಮಡಿಲಲ್ಲಿ ಇರುವ ಪ್ರೀತಿಯ ಕಂಬಳಿಯನ್ನು ಕಿತ್ತೆಸೆದು ಮಂಚದಿಂದಿಳಿದು ಬರುವಾಗ, ಪುರಾಣ ಕಥೆಗಳಲ್ಲಿ ಕೇಳಿದ ನಿಗ್ರಹ, ಕರ್ಮಯೋಗ...ಹೀಗೆ ಏನೇನೋ ಎಲ್ಲ ನೆನಪಾಗುತ್ತದೆ.
ಅಲ್ಲಿ ಹಳ್ಳಿಯ ಗದ್ದೆ ಬದುಗಳಲ್ಲಿ ಸುರಿವ ಇಬ್ಬನಿ... ಕೊಯ್ಲಾಗದೇ ಉಳಿದ ಗದ್ದೆಗಳಲ್ಲಿ ಪೈರುಗಳಲ್ಲಿನ ಇಬ್ಬನಿ ಬಿಂದುಗಳನ್ನು ಆಯ್ದು ಆಯ್ದು ಕುಡಿವ ತೋರು ಬೆರಳುದ್ದದ, ಹೆಸರು ಗೊತ್ತಿಲ್ಲದ ಬಣ್ಣದ ಹಕ್ಕಿ, ಮತ್ತೆ ಸುಗ್ಗಿ ಬಿತ್ತನೆಗೆ ಎಂದು ಪಕ್ಕದ ಮನೆಯವರೊಂದಿಗೆ ಮಾತನಾಡುವ ಮನೆಯಾತ.. ಎಲ್ಲ ಚೆನ್ನಾಗಿವೆ. ಹುಡುಗರೆಲ್ಲಾ ಕೊಯ್ಲಾದ ಗದ್ದೆಗಳಲ್ಲಿರುವ ಒಡ್ಡುಗಳನ್ನೆಲ್ಲಾ ಕಿತ್ತು ಕ್ರಿಕೆಟ್ ಗ್ರೌಂಡ್ ರೆಡಿ ಮಾಡುತ್ತಲೇ ಕ್ರಿಸ್ಮಸ್ ರಜೆಯ ಕನಸು ಕಾಣುತ್ತಾರೆ. ಅಮ್ಮ ನಾಳೆ ಕಾರ್ತೀಕ ಸೋಮವಾರ ... ಬೆಳಿಗ್ಗೆ ಬೇಗ ಏಳಬೇಕು ಎನ್ನುತ್ತಾ ಸಂಜೆ ಹಣತೆಗೆ ಎಣ್ಣೆ ಹಾಕುತ್ತಿದ್ದರೆ ಗಾಳಿ ತೇಲಿ ಬರುತ್ತದೆ. ಸದ್ಯ ಮಳೆಯ ಸುಳಿವಿಲ್ಲ ಅಲ್ವ ಅಂತ ನೆಮ್ಮದಿ.
ಹವಾಮಾನ ವರದಿಯಲ್ಲಿ ಒಣ ಹವೆಯ ಪ್ರಮಾಣಗಳದೇ ಲೆಕ್ಕವಿರುವುದು ಗುಲ್ಬರ್ಗದಲ್ಲಿ ಉಷ್ಣಾಂಶ 15 ಡಿಗ್ರಿಗಿಳಿದಿದೆ. ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 18 ಡಿಗ್ರಿ ಇರುತ್ತದೆ ಎಂದಿದ್ದಾರೆ. ಬೆಂಗಳೂರಿಗರಿಗೆ ಸ್ವಚ್ಛ ಆಕಾಶದ ಸೀಸನ್. ಸಂಜೆಯಾದಂತೆ ಆಕಾಶ ಪ್ರಿಯರ ಮನೆಯ ತಾರಸಿಯಲ್ಲಿ ಎಲ್ಲ ಪಟ್ಟಾಂಗಗಳು....ನಿರ್ಣಯಗಳು...