ತೆರಳಲಿದೆ ಚೆನ್ನೈಗೆ ಕನ್ನಡ ಚಲನಚಿತ್ರ ಕಲಾವಿದರ ನಿಯೋಗ
ಬೆಂಗಳೂರು : ಸದನದಲ್ಲಿ ರಾಜ್ಕುಮಾರ್ ಅಪಹರಣ ವಿಷಯ ಪ್ರತಿಧ್ವನಿಸಿದೆ. ಮಂಗಳವಾರದ ಅನಿರೀಕ್ಷಿತ ಬೆಳವಣಿಗೆಯಲ್ಲಿ ನೆಡುಮಾರನ್ ಸಂಧಾನಕ್ಕೆ ಕಾಡಿಗೆ ಹೋಗಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ಏನು ಕ್ರಮ ಕೈಗೊಂಡಿದೆ ಎಂಬುದು ಪ್ರತಿಪಕ್ಷಗಳ ಪ್ರಶ್ನೆಯಾಗಿದೆ. ರಾಜ್ಕುಮಾರ್ ಅಪಹರಣ 102 ದಿನಕ್ಕೆ ಕಾಲಿಟ್ಟಿದೆ.
ವೀರಪ್ಪನ್ ಅಟ್ಟಹಾಸಕ್ಕೆ ಕೊನೆ ಇಲ್ಲವೇ? ಸರಕಾರ ಹೀಗೆ ಕೈಕಟ್ಟಿ ಕುಳಿತರೆ ಮುಂದೇನು ಗತಿ ಎಂಬ ಪ್ರಶ್ನೆಯೂ ಎದುರಾಗಿದೆ. ಇದು ಕೇವಲ ರಾಜ್ಕುಮಾರ್ ಅವರೊಬ್ಬರ ಪ್ರಶ್ನೆಯಾಗಿ ಮಾತ್ರ ಉಳಿದಿಲ್ಲ. ಪ್ರತಿಯಾಬ್ಬ ಪ್ರಜೆಗೂ ರಕ್ಷಣೆ ನೀಡಬೇಕಾದ ಸರಕಾರ ಏನು ಕ್ರಮ ಕೈಗೊಳ್ಳುತ್ತದೆ ಎನ್ನುವ ಬಗ್ಗೆ ಸರ್ವತ್ರ ಚರ್ಚೆ ನಡೆಯುತ್ತಿದೆ.
ತಮಿಳು ನಾಡು ಹಾಗೂ ಕರ್ನಾಟಕ ಸರಕಾರಗಳೆರಡೂ ಪರ್ಯಾಯ ಕಾರ್ಯತಂತ್ರ ರೂಪಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಬೇಕು ಹಾಗೂ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂಬ ಸಲಹೆಗಳೂ ಬರುತ್ತಿವೆ. ನೆಡುಮಾರನ್ ಸಂಧಾನಕ್ಕೆ ಹೋಗಲೊಪ್ಪದಿದ್ದರೆ, ಯಾರನ್ನು ಸಂಧಾನಕ್ಕಾಗಿ ಕಳುಹಿಸುತ್ತೀರಿ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಆದರೆ, ಸರಕಾರದಿಂದ ತತ್ಕ್ಷಣಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ.
ಚೆನ್ನೈಗೆ ಚಿತ್ರಕಲಾವಿದ ನಿಯೋಗ : ಈ ಮಧ್ಯೆ ರಾಜ್ಕುಮಾರ್ ಅವರ ಬಿಡುಗಡೆಗೆ ಸಂಧಾನ ಮಾರ್ಗ ಮುಂದುವರಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಕೋರುಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆ.ಸಿ.ಎನ್. ಚಂದ್ರು ಅವರ ನೇತೃತ್ವದ ತಂಡ ಚೆನ್ನೈಗೆ ತೆರಳಲಿದೆ. ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ರಾಕ್ಲೈನ್ ವೆಂಕಟೇಶ್, ಎಚ್.ಎನ್. ಮಾರುತಿ ಮತ್ತಿತರ ಕಲಾವಿದರು ನಿಯೋಗದಲ್ಲಿದ್ದಾರೆ.
ನೆಡುಮಾರನ್ಗೆ ಮನವಿ : ಚೆನ್ನೈಗೆ ತೆರಳಿರುವ ರಾಜ್ಯ ಚಲನಚಿತ್ರ ಕಲಾವಿದರ ನಿಯೋಗವು ರಾಜಕೀಯ ವಿವಾದವನ್ನು ಲೆಕ್ಕಿಸದೆ, ಕನ್ನಡದ ಮೇರು ನಟನನ್ನು ವೀರಪ್ಪನ್ ವಶದಿಂದ ಬಿಡಿಸಿಕೊಂಡು ಬರಲು ಕಾಡಿಗೆ ತೆರಳುವಂತೆ ನೆಡುಮಾರನ್ ಅವರಲ್ಲಿ ಮನವಿ ಮಾಡಿದೆ.
ವಾರ್ತಾ
ಸಂಚಯ
ಮುಖಪುಟ
/
ರಾಜ್
ಅಪಹರಣ