ಗಂಗಾವತಿ ಉದ್ರಿಕ್ತ : ಸಚಿವರ ಮನೆಗೆ ರೈತರ ಮುತ್ತಿಗೆ ಯತ್ನ
ಗಂಗಾವತಿ : ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಲು ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ ಸೋಮವಾರ ಮುತ್ತಿಗೆ ಹಾಕಲು ಪ್ರಯತ್ನಿಸಿದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಯಲ್ಲಿ ಉಂಟಾದ ನೂಕು ನುಗ್ಗಲಲ್ಲಿ ನೂರಾರು ರೈತರು ಗಾಯಗೊಂಡಿದ್ದಾರೆ.
ಪಟ್ಟಣದಲ್ಲಿ ಮೂರು ದಿನಗಳವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಶಾಸಕರ ಹಾಗೂ ಸಚಿವರ ಮನೆಗೆ ಸೂಕ್ತ ರಕ್ಷಣೆ ಒದಗಿಸಲಾಗಿದೆ. ಪೊಲೀಸರ ದಾಳಿಯಿಂದ ಗಾಯಗೊಂಡಿರುವ ರೈತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಹಿನ್ನೆಲೆ : ಭತ್ತದ ಬೆಳೆಗೆ ಬೆಂಬಲ ಬೆಲೆ ನಿಶ್ಚಯ ಪಡಿಸುವ ವಿಷಯದ ಕುರಿತ ಜಿಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಲು ನ. 6 ರಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ಸಭೆ ನಡೆಸಲು ಸೂಚಿಸಿದ್ದರು. ಆದರೆ, ಮಂಗಳವಾರ ಕೃಷಿ ಮಾರುಕಟ್ಟೆ ಆವರಣದಲ್ಲಿ ಸೇರಿದ್ದ ಸುಮಾರು 4 ಸಾವಿರ ರೈತರು, ಸಚಿವರು ತಮ್ಮಲ್ಲಿಗೇ ಬಂದು ಸಮಜಾಯಿಷಿ ನೀಡಲು ಪಟ್ಟು ಹಿಡಿದರು. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಚರ್ಚಿಸುವುದಾಗಿ ಆಶ್ವಾಸನೆ ನೀಡಿದ ಸಚಿವರು, ತಮ್ಮ ಬೆಂಬಲಿಗರೊಂದಿಗೆ ಮಾತ್ರ ಸಮಾಲೋಚನೆ ನಡೆಸಿದರು. 4 ಗಂಟೆಗಳ ಕಾಲ ಕಾದರೂ ತಮ್ಮಲ್ಲಿಗೆ ಬರದ ಸಚಿವರ ಬಗ್ಗೆ ರೊಚ್ಚಿಗೆದ್ದ ರೈತರು, ಸಚಿವರ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿದರು.
ಸಚಿವರು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ನಡೆದಿದ್ದ ರೈತರ ಗುಂಪನ್ನು ನೀಲಕಂಠೇಶ್ವರ ಸರ್ಕಲ್ ಬಳಿ ರೈತರು ತಡೆದರು. ಈ ಸಂದರ್ಭದಲ್ಲಿ ರೈತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಸಿಡಿತ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದರು. ಈ ಮುನ್ನ ಸಚಿವರ ಮನೆಯತ್ತ ಧಾವಿಸುತ್ತಿದ್ದ ರೈತರನ್ನು ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ಪೊಲೀಸರು ತಡೆದಾಗ ರೈತರು ಮತ್ತು ಪೊಲೀಸರ ನಡುವೆ ಮಾರಾಮಾರಿ ನಡೆಯಿತು.
ಗಂಗಾವತಿ ಬಂದ್ : ಗಲಭೆಯಲ್ಲಿ ಕೆಲವು ಅಂಗಡಿ ಮುಂಗಟ್ಟುಗಳಿಗೆ ಕಲ್ಲು ತೂರಿದ ಘಟನೆಗಳು ನಡೆದಿವೆ. ಬಜಾರಿನಲ್ಲಿನ ಎಲ್ಲಾ ಅಂಗಡಿಗಳನ್ನು ರೈತರು ಬಲವಂತವಾಗಿ ಮುಚ್ಚಿಸಿ ಬಂದ್ ಆಚರಿಸಿದರು. ಶಾಲಾ ಕಾಲೇಜುಗಳು, ಸಿನಿಮಾ ಮಂದಿರಗಳು ಸೇರಿದಂತೆ ಎಲ್ಲಾ ವ್ಯವಹಾರಗಳು ಸ್ಥಗಿತವಾಗಿದ್ದವು. ಪ್ರಸ್ತುತ ಗಂಗಾವತಿ ನಗರ ಉದ್ರಿಕ್ತವಾಗಿದ್ದು, ಪಟ್ಟಣದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...