ಅಪಘಾತಕ್ಕೀಡಾದ ವಿಮಾನದಲ್ಲಿ 12 ಮಂದಿ ಆಂಧ್ರಪ್ರದೇಶದವರು
ಹೈದರಾಬಾದ್ : ಭಾರತೀಯ ಕಾಲಮಾನದ ರೀತ್ಯ ಮಂಗಳವಾರ ರಾತ್ರಿ 8.49ಕ್ಕೆ ತೈಪಿ ಬಳಿ ಸಂಭವಿಸಿದ ಸಿಂಗಪೂರ್ ಏರ್ಲೈನ್ಸ್ ವಿಮಾನ ಅಪಘಾತದಲ್ಲಿ ಮಡಿದ ಭಾರತೀಯ ಪ್ರಯಾಣಿಕರ ಬಂಧುಗಳು ಬುಧವಾರ ಸಂಜೆ ಚೆನ್ನೈ ಮೂಲಕ ಸಿಂಗಪೂರ್ಗೆ ಪ್ರಯಾಣ ಬೆಳೆಸಿದರು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 159 ಮಂದಿಯಲ್ಲಿ 78 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ 11 ಮಂದಿ ಆಂಧ್ರಪ್ರದೇಶದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಲಾಕ್ ಬಾಕ್ಸ್ ಪತ್ತೆ: ಈ ಭೀಕರ ವಿಮಾನಾಪಘಾತದಲ್ಲಿ ಬದುಕುಳಿದ ವಿಮಾನದ ಕ್ಯಾಪ್ಟನ್ ಹೇಳಿಕೆಯ ರೀತ್ಯ ವಿಮಾನ ರನ್ವೇಯಲ್ಲಿ ಯಾವುದೋ ಒಂದು ವಸ್ತುವಿಗೆ ಅಪ್ಪಳಿಸಿದೆ. ಮೃತ ದೇಹಗಳ ಪತ್ತೆಕಾರ್ಯ ಮುಂದುವರಿದಿದೆ. ಕಳೆದ 28 ವರ್ಷಗಳಲ್ಲಿ ಸಿಂಗಪೂರ್ ಏರ್ಲೈನ್ಸ್ ನ ವಿಮಾನಗಳು ಅಪಘಾತಕ್ಕೆ ಈಡಾಗಿರಲ್ಲಿಲ್ಲ. ಈ ಮಧ್ಯೆ ಅಪಘಾತಕ್ಕೀಡಾದ ವಿಮಾನದಲ್ಲಿದ್ದ ಒಂದು ಬ್ಲಾಕ್ಬಾಕ್ಸ್ ಪತ್ತೆಯಾಗಿದೆ.
ಅಪಘಾತಕ್ಕೀಡಾದ ವಿಮಾನದಲ್ಲಿ ಆಂಧ್ರಪ್ರದೇಶದ ಕನಿಷ್ಠ 12 ಮಂದಿ ಪ್ರಯಾಣಿಕರಿದ್ದರು. ಇವರಲ್ಲಿ ಒಂದೇ ಕುಟುಂಬದ ನಾಲ್ವರಿದ್ದಾರೆ ಎಂದು ಅಧಿಕಾರಿಗಳು ಹೈದರಾಬಾದ್ನಲ್ಲಿ ತಿಳಿಸಿದ್ದಾರೆ. ಲಾಸ್ ಏಂಜಲೀಸ್ಗೆ ತೆರಳುವ ಸಲುವಾಗಿ ಸಿಂಗಪೂರ್ ಏರ್ಲೈನ್ಸ್ ವಿಮಾನ ಏರಲು ಮೂವರು ಮಹಿಳೆಯರು ಹಾಗೂ ಎರಡು ಮಕ್ಕಳೂ ಇದ್ದ ಪ್ರಯಾಣಿಕರ ತಂಡ ಹೈದರಾಬಾದ್ನಿಂದ ಸಿಂಗಪೂರ್ಗೆ ಏರ್ ಇಂಡಿಯಾ 427 ವಿಮಾನದಲ್ಲಿ ಮಂಗಳವಾರ ಬೆಳಗ್ಗೆ ತೆರಳಿದ್ದರು.
ಈ ಪೈಕಿ ಸೋಮಶೇಖರ್ ವರಪ್ರಸಾದ್ ವಿಮಾನಾಪಘಾತದಲ್ಲಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಅಧಿಕಾರಿಗಳ ರೀತ್ಯ ಸುಮಾರು 70 ವರ್ಷ ವಯಸ್ಸಿನ ಮೊಹಮ್ಮದ್ ಮೊಯಿನುದ್ದೀನ್ ಖಾನ್ ಮತ್ತು ನೂರ್ ಜಹಾ ಬೇಗಂ ಗಾಲಿ ಕುರ್ಚಿಯಲ್ಲಿ ಈ ನತದೃಷ್ಟ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಲಾಸ್ ಏಂಜಲೀಸ್ ಮೂಲದ ಯುನಿವರ್ಸಲ್ ಎಲೆಕ್ಟ್ರಾನಿಕ್ಸ್ನ ಮಾರ್ಕೆಟಿಂಗ್ ವಿಭಾಗ ಸೀನಿಯರ್ ಡೈರೆಕ್ಟರ್ ಕೆ. ಶ್ರೀನಿವಾಸ್ ಹಾಗೂ ಅವರ ಪತ್ನಿ ಕೆ. ಸಂಗೀತಾ ಅವರು ತಮ್ಮ ಐದು ವರ್ಷದ ಹೆಣ್ಣು ಮಗು ಕೆ. ಸ್ನೇಹಾ ಮತ್ತು ಒಂದು ವರ್ಷದ ಮಗ ಕೆ. ಸಹಿಲ್ ಜತೆ ಪ್ರಯಾಣ ಬೆಳೆಸಿದ್ದರು. ಉಳಿದ ಭಾರತೀಯ ಪ್ರಯಾಣಿಕರನ್ನು ವಿ. ನೀಲಾ, ಪಿ. ಆಕಾಶ್, ವಿ. ಜನಾರ್ದನ್, ರಬಿಯಾ ಅಲಿ ನಜೀರ್ ಮತ್ತು ಎಂ. ಸೂರ್ಯನಾರಾಯಣ ಎಂದು ಗುರುತಿಸಲಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...