ಟಾಡಾ ಬಂದಿಗಳ ವಿಚಾರಣೆ: ಕಾಯ್ದಿರಿಸಿದ ತೀರ್ಪು
ನವದೆಹಲಿ : ಎರಡು ತಿಂಗಳಿಗಳ ಕಾಲ ಟಾಡಾ ಬಂದಿಗಳ ಬಿಡುಗಡೆ ಸಂಬಂಧದ ಅರ್ಜಿಯ ವಿಚಾರಣೆ ನಡೆಸಿದ ಸರ್ವೋನ್ನತ ನ್ಯಾಯಾಲಯ ಮಂಗಳವಾರ ತೀರ್ಪನ್ನು ಕಾಯ್ದಿರಿಸಿತು.
ಕಾಡುಗಳ್ಳ ವೀರಪ್ಪನ್ ಸಂಬಂಧದ ಎಲ್ಲ ಮೊಕದ್ದಮೆಗಳ ವಿಚಾರಣೆ ಪೂರ್ಣವಾಗಿದ್ದು, ರಾಜ್ಕುಮಾರ್ ಅವರನ್ನು ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಬಿಡುಗಡೆ ಮಾಡಬೇಕಾಗಿರುವ ಟಾಡಾ ಬಂದಿಗಳ ಕುರಿತಾದ ಅರ್ಜಿಯ ತೀರ್ಪನ್ನು ಕಾಯ್ದಿರಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಪಿ. ಬರೂಚಾ, ಡಿ.ಪಿ. ಮಹಾಪಾತ್ರ ಹಾಗೂ ವೈ.ಕೆ. ಸಬರ್ವಾಲ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಮೈಸೂರಿನ ಅಬ್ದುಲ್ ಕರೀಂ ಅವರು ಸಲ್ಲಿಸಿದ್ದ ವಿಶೇಷ ತೆರವು ಅರ್ಜಿಗೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳ ಹಿಂದೆ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ವಿಚಾರಣೆ ಅವಧಿಯಲ್ಲಿ ಕಾಡುಗಳ್ಳ ವೀರಪ್ಪನ್ನನ್ನು ಹಿಡಿಯಲಾಗದೆ ಕೈಕಟ್ಟಿ ಕುಳಿತಿರುವ ಕರ್ನಾಟಕ ಹಾಗೂ ತಮಿಳು ನಾಡು ಸರಕಾರಗಳೆರಡನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.
ಮಂಗಳವಾರ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಪೀಠವು ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿದ ಕರ್ನಾಟಕದ ವಕಾಲತ್ತು ವಹಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರನ್ನು ತರಾಟೆಗೆ ತೆಗೆದುಕೊಂಡಿತು.
ಡಾ. ರಾಜ್ಕುಮಾರ್ ಅವರನ್ನು ತನ್ನ ವಶದಿಂದ ಬಿಡಲು ಕಾಡುಗಳ್ಳ ವೀರಪ್ಪನ್ ಇಟ್ಟಿದ್ದ ಬೇಡಿಕೆಗಳಲ್ಲಿ ಒಂದಾದ ಟಾಡಾ ಬಂದಿಗಳ ಬಿಡುಗಡೆ ಷರತ್ತನ್ನು ಪೂರೈಸಲು ಕರ್ನಾಟಕ ಸರಕಾರ ಕೈಗೊಂಡಿದ್ದ ನಿರ್ಧಾರವನ್ನು ಪ್ರಶ್ನಿಸಿ ವೀರಪ್ಪನ್ ಸಹಚರರಿಂದ ಹತರಾದ ಪೊಲೀಸ್ ಅಧಿಕಾರಿ ಶಕೀಲ್ ಅಹ್ಮದ್ ಅವರ ತಂದೆ ಅಬ್ದುಲ್ ಕರೀಂ ಈ ವಿಶೇಷ ತೆರವು ಅರ್ಜಿ ಸಲ್ಲಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.