ಹತ್ತು ವರ್ಷ ಪೂರೈಸುವ ಕನ್ನಡ ವಿ.ವಿ. ದಶಮಾನೋತ್ಸವ ನ.3ರಂದು
ಹಂಪೆ : ನವೆಂಬರ್ ಕರ್ನಾಟಕದ ಪಾಲಿಗೆ ವಿಶೇಷ ತಿಂಗಳು. ಕನ್ನಡಿಗರೆಲ್ಲಾ ಹೆಮ್ಮೆಯಿಂದ ರಾಜ್ಯೋತ್ಸವ ಆಚರಿಸುವ ತಿಂಗಳಿದು. ಈ ಬಾರಿಯ ರಾಜ್ಯೋತ್ಸವದ ಮೆರುಗಿಗೆ ಮತ್ತೆರಡು ಗರಿ ಸೇರಿವೆ. ಒಂದು ವಿಶ್ವವೇ ನಿಬ್ಬೆರಗಾಗುವಂತಹ ಬೆಂಗಳೂರು ಐ.ಟಿ. ಡಾಟ್ಕಾಂ ಮತ್ತೊಂದು ಕನ್ನಡ ವಿಶ್ವ ವಿದ್ಯಾಲಯದ ದಶಮಾನೋತ್ಸವ.
ಹಂಪಿಯ ಕನ್ನಡ ವಿಶ್ವ ವಿದ್ಯಾಲಯಕ್ಕೆ ಹತ್ತು ವರ್ಷ ತುಂಬುತ್ತಿದೆ. ಈ ಸಂಬಂಧ ನವೆಂಬರ್ 3ರಂದು ಹಂಪಿಯಲ್ಲಿ ದಶಮಾನೋತ್ಸವ ಆಚರಣೆ. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಅಂದು ಬೆಳಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ಅಕ್ಷರ ಭವನದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದಾರೆ. ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಮುಖ್ಯ ಅತಿಥಿ. ಸಮಾರಂಭದ ಅಧ್ಯಕ್ಷತೆಯನ್ನು ವಿ.ವಿ.ಯ ಕುಲಪತಿ ಡಾ. ಎಂ.ಎಂ. ಕಲಬುರ್ಗಿ ವಹಿಸುವರು.
ಈ ಶುಭ ಸಂದರ್ಭದಲ್ಲಿ ವಿಶ್ವ ವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಸಾವಿರ ಕೀರ್ತನೆಗಳೂ ಪುಸ್ತಕವೂ ಸೇರಿದಂತೆ 50 ಪುಸ್ತಕಗಳನ್ನು ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್ ಬಿಡುಗಡೆ ಮಾಡುವರು. ತಮ್ಮ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅಲ್ಲಿನ ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಬಾರದಿರುತ್ತಾರೆಯೇ. ಕಾರ್ಯಕ್ರಮದಲ್ಲಿ ಸಚಿವರಾದ ಎಂ.ವೈ. ಗೋರ್ಪಡೆ, ಅಲ್ಲಂ ವೀರಭದ್ರಪ್ಪ, ದಿವಾಕರ ಬಾಬು, ಸಂಸದರಾದ ಕೆ. ಬಸವನಗೌಡ, ಕೆ.ಸಿ. ಕೊಂಡಯ್ಯ, ಶಾಸಕಿ ಗುಜ್ಜಲ ಜಯಲಕ್ಷ್ಮೀ ಪಾಲ್ಗೊಳ್ಳುತ್ತಿದ್ದಾರೆ.
ಪುಸ್ತಕ ಪ್ರಿಯರಿಗೆ ಸುಗ್ಗಿ : ದಶಮಾನೋತ್ಸವದ ನಿಮಿತ್ತ ಕನ್ನಡ ವಿಶ್ವ ವಿದ್ಯಾಲಯ ಹೊರತಂದಿರುವ ಈ ಪುಸ್ತಕಗಳು ಶೇಕಡಾ 50ರ ರಿಯಾಯಿತಿ ದರದಲ್ಲಿ ಲಭ್ಯ.