ದೀಪಾವಳಿಗೆ ಮಳೆ ಅಡ್ಡಿ ಮಾಡದಿರಲಿ
ಬೆಂಗಳೂರು : ಮೂರ್ನಾಲ್ಕು ದಿನದಿಂದ ನಾಲ್ಕಾರು ಜನರನ್ನು ಬಲಿತೆಗೆದುಕೊಂಡು ರಾಜ್ಯದಲ್ಲಿ ಕೋಟ್ಯಂತರ ರುಪಾಯಿ ನಷ್ಟ ಉಂಟುಮಾಡಿದ ಮಳೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಂಚ ತಣ್ಣಗಾಗಿದೆ. ಕರಾವಳಿ ಕರ್ನಾಟಕದ ಕೆಲವೆಡೆ, ಒಳನಾಡಿನ ಅನೇಕ ಕಡೆ ಮಳೆ ಬಿದ್ದಿದೆ.
ಚಿಕ್ಕಮಗಳೂರಿನಲ್ಲಿ 5 ಸೆಂಟಿ ಮೀಟರ್, ಬಂಡೀಪುರ, ಭಾಗಮಂಡಲಗಳಲ್ಲಿ ತಲಾ 3, ಮಂಗಳೂರು ವಿಮಾನ ನಿಲ್ದಾಣ, ಗುಂಡ್ಲುಪೇಟೆ, ಕಳಸಗಳಲ್ಲಿ ತಲಾ 2 ಸೆಂಟಿ ಮೀಟರ್, ಬಂಟ್ವಾಳ, ಸುಬ್ರಹ್ಮಣ್ಯ, ವಿರಾಜಪೇಟೆಗಳಲ್ಲಿ ತಲಾ 1 ಸೆಂಟಿ ಮೀಟರ್ ಮಳೆ ಬಿದ್ದಿದೆ.
ರಾಜ್ಯದ ಕೆಲವೆಡೆಗಳಲ್ಲಿ ದಿನದ ಗರಿಷ್ಠ ತಾಪಮಾನದಲ್ಲಿ ಏರಿಕೆ ಕಂಡು ಬಂದಿದ್ದರೆ, ದಕ್ಷಿಣ ಒಳನಾಡಿನಲ್ಲಿ ಕಡಿಮೆ ಆಗಿದೆ. ಬೀದರ್ನಲ್ಲಿ ಅತಿ ಹೆಚ್ಚು ಎಂದರೆ 34.6 ಡಿಗ್ರಿ ಸೆಲ್ಸಿಯಸ್ ಹಾಗೂ ಚಿತ್ರದುರ್ಗದಲ್ಲಿ ಕನಿಷ್ಠ 18.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ರಾಜ್ಯದ ಕೆಲವೆಡೆ ಮಳೆ ಬೀಳುವ ಸಂಭವ ಇದೆ. ಬೆಳಕಿನ ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿ ಆಗದಿರಲಿ.
ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಭ್ರ ಆಕಾಶ ಇದ್ದು, ಉಷ್ಣಾಂಶ 29-17 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಅಂದರೆ ಪಟಾಕಿ ಹಚ್ಚಿ ಆನಂದಿಸುವ ಮಕ್ಕಳಿಗೆ ಮಳೆಯ ಕಾಟ ಇಲ್ಲ.