ವಿಶ್ವಬ್ಯಾಂಕ್ ನೆರವಿನ ಕೆರೆಗಳ ಅಭಿವೃದ್ಧಿ ಯೋಜನೆಗೆ ಕೇಂದ್ರ ಅಸ್ತು
ಬೆಂಗಳೂರು : ವಿಶ್ವಬ್ಯಾಂಕ್ ನೆರವಿನೊಂದಿಗೆ ರಾಜ್ಯಗಳ ಕೆರೆಗಳ ಅಭಿವೃದ್ಧಿಗೆ ರೂಪಿಸಲಾಗಿರುವ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಕೆರೆಗಳ ಹೂಳೆತ್ತುವ ವಿಷಯ ಕುರಿತು ಮಂಗಳವಾರ ಸದನದಲ್ಲಿ ರೋಣ ಕ್ಷೇತ್ರದ ಶಾಸಕ ಗುರುಪಾದಗೌಡ ಕೇಳಿದ ಪ್ರಶ್ನೆಗೆ, ಸಣ್ಣ ನೀರಾವರಿ ಸಚಿವ ಕುಮಾರ್ ಬಂಗಾರಪ್ಪ ಉತ್ತರಿಸುತ್ತಿದ್ದಾಗ ಜನತಾದಳ (ಯು)ದ ನಾಯಕ ಬೈರೇಗೌಡ ಕೇಳಿದ ಪ್ರಶ್ನೆಗೆ ಮಧ್ಯ ಪ್ರವೇಶಿದ ಕೃಷ್ಣ ಈ ವಿಷಯ ತಿಳಿಸಿದರು.
ನೆರವು ನೀಡವ ಸಂಬಂಧ ವಿಶ್ವಬ್ಯಾಂಕ್ ಅಧಿಕಾರಿಗಳ ತಂಡ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದೆ. ನೆರವು ಮಾರ್ಚ್ ವೇಳೆಗೆ ಲಭ್ಯವಾಗಲಿದೆ. ಯೋಜನೆಯಡಿ ರಾಜ್ಯದ 40 ಸಾವಿರ ಕೆರೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ವಿಶ್ವಬ್ಯಾಂಕ್ ಹಣ ಮಂಜೂರಾಗುವುದು ತಡವಾಗುವ ಹಿನ್ನೆಲೆಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಹುಡ್ಕೋದಿಂದ 200 ಕೋಟಿ ರುಪಾಯಿ ನೆರವಿಗೆ ಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಶಾಸಕರ ನಿಧಿ : ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರ ನಿಧಿ ಸ್ಥಾಪಿಸುವ ಸಂಬಂಧ ಪ್ರಸ್ತುತ ಅಧಿವೇಶನದಲ್ಲೇ ಸರಕಾರ ನಿರ್ಧಾರ ಪ್ರಕಟಿಸುವುದೆಂದು ಕೃಷ್ಣ ತಿಳಿಸಿದ್ದಾರೆ. ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ ಎಂದು ಶಾಸಕಾಂಗ ಪಕ್ಷದ ಕಾರ್ಯದರ್ಶಿ ಕರಿಯಣ್ಣ ತಿಳಿಸಿದ್ದಾರೆ.
ಸಂಸದರಿಗಿರುವಂತೆ ತಮಗೂ ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗಾಗಿ ಶಾಸಕರ ನಿಧಿ ಸ್ಥಾಪಿಸಬೇಕೆಂದು ಶಾಸಕರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಸರಕಾರದ ನಿರ್ಧಾರಕ್ಕೆ ಪಕ್ಷದ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
(ಯುಎನ್ಐ)